ಪ್ರಿಯಾಂಕಾ ಜಾರಕಿಹೊಳಿ ಅತೀ ಚಿಕ್ಕ ಸಂಸದೆ ಎಂಬ ಹೆಮ್ಮೆ!
– ಚಿತ್ರದುರ್ಗ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ
– ಗ್ಯಾರಂಟಿ ಯೋಜನೆಯಿಂದ ನನಗೆ ಗೆಲುವು: ಪ್ರಿಯಾಂಕಾ ಜಾರಕಿಹೊಳಿ
NAMMUR EXPRESS NEWS
ಹೊಸದುರ್ಗ : ಜಾರಕಿಹೊಳಿ ಕುಟುಂಬ ಕಾಂಗ್ರೇಸ್, ಬಿಜೆಪಿ, ಜನತಾದಳ ಹಾಗೂ ಇನ್ನಿತರೆ ಯಾವುದೇ ಪಕ್ಷದ ಚಿನ್ಹೆಯಲ್ಲಿ ನಿಂತರೂ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಚಿಕ್ಕ ವಯಸ್ಸಿಗೆ ಜನ ನಿಮ್ಮನ್ನು ಸಂಸತ್ತಿಗೆ ಆಯ್ಕೆಮಾಡಿ ಕಳಿಸಿದ್ದು, ನೀವು ಇನ್ನೂ ಯುವಕರು ಮತ್ತು ವಿದ್ಯಾವಂತರಾಗಿದ್ದೀರಿ. ಪುರುಷರು ಮತ್ತು ಹಿರಿಯ ಸಂಸದರಿಗಿಂತ ಹೆಚ್ಚಿನ ಕೆಲಸ ಮಾಡಿ ಎಂದು ಸಂಸದೆ ಪ್ರಿಯಾಂಕ ಜಾರಕಿಹೊಳಿಗೆ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠಕ್ಕೆ ಬುಧವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಗೊಂಡಿರುವ ಕುಮಾರಿ ಪ್ರಿಯಾಂಕಾ ಜಾರಕಿಹೊಳಿಯವರು ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು. ನಂತರ ಸ್ವಾಮೀಜಿ ಸಂಸದರನ್ನು ಸನ್ಮಾನಿಸಿ, ಅಭಿನಂದಿಸಿ ಮಾತನಾಡಿದರು.
ಪ್ರಿಯಾಂಕ ಚಿಕ್ಕವಯಸ್ಸಿನಲ್ಲಿ ಲೋಕಸಭಾ ಸದಸ್ಯೆಯಾಗಿರುವಂಥದ್ದು ಹೆಚ್ಚಿನ ಸೇವೆಯನ್ನು ಸಲ್ಲಿಸಲಿಕ್ಕೆ ಒಂದುಸದಾವಕಾಶ ಸಿಕ್ಕಂತಾಗಿದೆ. ತಮ್ಮ 5 ವರ್ಷದ ಸೇವಾವಧಿಯಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವಂಥ ಸಂಕಲ್ಪ ನಿಮ್ಮದಾಗಲಿ. ಅದರಲ್ಲೂ ಕರ್ನಾಟಕದಲ್ಲಿ 3 ಜನ ಮಹಿಳೆಯರು ಲೋಕಸಭಾ ಸದಸ್ಯರಾಗಿರುವಂಥದ್ದು ತುಂಬಾ ಸಂತೋಷ. ಚಿಕ್ಕೋಡಿಯಿಂದ ಪ್ರಿಯಾಂಕ ಜಾರಕಿಹೊಳಿ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಬೆಂಗಳೂರಿನಿಂದ ಶೋಭಾ ಕರಂದ್ಲಾಜೆ ಈ ಮೂರೂ ಜನ ಮಹಿಳೆಯರು ವಿದ್ಯಾವಂತರು. ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಕೆಲಸ ಮಾಡಿ ತೋರಿಸಿ ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಯಿಂದ ನನಗೆ ಗೆಲುವು
ಮಾಧ್ಯಮ ಮಿತ್ರರೊಂದಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಮಾತನಾಡಿ, ನಮ್ಮ ತಂದೆ ಮತ್ತು ನಮ್ಮ ಕುಟುಂಬದ ನಿರಂತರ ಸೇವೆಯ ಪರಿಣಾಮವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರು ನನಗೆ ಹೆಚ್ಚಿಗೆ ಮತ ನೀಡಿ, ಸಂಸತ್ತಿಗೆ ಆಯ್ಕೆ ಮಾಡಿ ಕಳಿಸಿದ್ದಾರೆ. ನಿರಂತರವಾಗಿ ನಮ್ಮ ಕುಟುಂಬ ನೊಂದ ಜನರಿಗೆ ನೆರವು ನೀಡುತ್ತಾ ಬಂದಿದೆ. ನಮ್ಮ ತಂದೆಯವರು ಕೂಡ ಶೋಷಿತರು, ಬಡವರು, ದಲಿತರು ಮತ್ತು ಹಿಂದುಳಿದವರ ಪರವಾಗಿ ಬುದ್ಧ ,ಬಸವ, ಅಂಬೇಡ್ಕರ್ ರವರ ತತ್ವದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ, ನೆರವು ನೀಡುತ್ತಾ ಬಂದಿದ್ದಾರೆ. ಅಲ್ಲದೇ, ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತಂದಿರುವ 5 ಗ್ಯಾರಂಟಿ ಮತ್ತು ಮಾಡಿರುವ ಅಭಿವೃದ್ಧಿ ಕಾರ್ಯದಿಂದಾಗಿ ನನಗೆ ಚುನಾವಣೆಯಲ್ಲಿ ಜಯ ಲಭಿಸಿದೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿಯವರ ಜನಪದ ಕಾರ್ಯಕ್ರಮಗಳು ಅವರ ಮಗಳು ಪ್ರಿಯಾಂಕಾ ಜಾರಕಿಹೊಳಿರವರ ಗೆಲುವಿಗೆ ಕಾರಣವಾಗಿವೆ. ಪ್ರಿಯಾಂಕಾ ಅವರು ಎಂ ಬಿ ಎ ಪದವೀಧರರಾಗಿದ್ದು ವಿದ್ಯಾವಂತ ಯುವ ನಾಯಕಿ ಇವರ ಸೇವೆ ನಮ್ಮ ರಾಜ್ಯಕ್ಕೆ ಅತ್ಯವಶ್ಯಕವಿದ್ದು ಅವರ ತಂದೆಯವರ ಮಾರ್ಗದರ್ಶನದಲ್ಲಿ ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡಲಿ ಎಂದು ನಮ್ಮ ಆಶಯವಾಗಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ, ಜಿ.ಪಂ. ಮಾಜಿ ಅಧ್ಯಕ್ಷ ವಿಶಾಲಾಕ್ಷಿ ನಟರಾಜ್, ಜಿ.ಪಂ.ಮಾಜಿ ಉಪಾಧ್ಯಕ್ಷ ತಾಳಿಕಟ್ಟೆ ಗಂಗಾಧರ್, ರಾಜಪ್ಪ,ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯ ಉಪಾಧ್ಯಕ್ಷ ತುಂಬಿನಕೆರೆ ಬಸವರಾಜ್, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ, ಕಂದಿಕೆರೆ ಸುರೇಶ್, ಪಾಲಯ್ಯ, ಮಧುರೆ ನಟರಾಜ್, ಮಧು ಮದಕರಿ, ಮಳಲಿ ರವಿತೇಜ, ಹೊಳಲ್ಕೆರೆ ತಾ ,ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರಂಗಸ್ವಾಮಿ, ಸುನಿಲ್, ತಾಲೂಕು ನಾಯಕ ಸಮಾಜದ ಅಧ್ಯಕ್ಷ ರಂಗನಾಥ್, ಕಾರ್ಯದರ್ಶಿ ವೆಂಗಳಾಪುರ ರಂಗನಾಥ್ ಮತ್ತು ಖಜಾಂಚಿ ಜಯಪ್ಪ ಶೇಖರಪ್ಪ , ರಂಗನಾಥ್ ಪ್ರಸನ್ನ ಸೇರಿದಂತೆ ಸಮುದಾಯದ ಹಲವು ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರಿದ್ದರು.