ಸಿದ್ದಪ್ಪನಹಟ್ಟಿ ಸರ್ಕಾರಿ ಶಾಲೆ ದತ್ತು ಪಡೆದ ಸದ್ಗುರು ಪ್ರದೀಪ್!
– ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೈ ಹಾಕಿದ ಯುವ ಉದ್ಯಮಿ
– ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುವ ಶಿಕ್ಷಣಕ್ಕೆ ಸಮಾನ ಶಿಕ್ಷಣಕ್ಕೆ ಪ್ಲಾನ್
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ತಾಲೂಕಿನಲ್ಲಿ ಹಿಂದುಳಿದ ಗ್ರಾಮ ಸಿದ್ದಪ್ಪನ ಹಟ್ಟಿಯ ಸರ್ಕಾರಿ ಶಾಲೆಯನ್ನು ಯುವ ಉದ್ಯಮಿ, ಸದ್ಗುರು ಆಯುರ್ವೇದ ಮುಖ್ಯಸ್ಥರಾದ ಪ್ರದೀಪ್ ಅವರು ದತ್ತು ಪಡೆದಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೈ ಹಾಕಿದ್ದಾರೆ.
ದತ್ತು ಪಡೆದು ಮಾತನಾಡಿದ ಪ್ರದೀಪ್ ಅವರು, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮುಂದೊಂದು ದಿನ ದೇಶವೇ ಮೆಚ್ಚುವಂತ ಸಾಧನೆ ಮಾಡಲಿ, ನಾವು ಬಡತನದಲ್ಲಿ ಹುಟ್ಟಿದ ಕಾರಣಕ್ಕೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುವ ಶಿಕ್ಷಣಕ್ಕಿಂತ ಹೆಚ್ಚಿನ ಶಿಕ್ಷಣ ನೀಡಲು ಸಿದ್ದಪ್ಪನ ಹಟ್ಟಿಯ ಶಾಲೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಹೊಸದುರ್ಗ ತಾಲೂಕಿನ ಸಿದ್ದಪ್ಪನಹಟ್ಟಿ ಸರ್ಕಾರಿ ಶಾಲೆ ದತ್ತ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅತಿ ಹಿಂದುಳಿದ ಬಡತನ ರೇಖೆಗಿಂತ ಕೆಳಗಿರುವ ಈ ಗ್ರಾಮದಲ್ಲಿ ಅತಿ ಶೀಘ್ರದಲ್ಲಿಯೇ ಈ ಶಾಲೆಗೆ ಬೇಕಾಗುವ ಎಲ್ಲಾ ರೀತಿಯ ಪರಿಕರಗಳನ್ನು ಒದಗಿಸಲಾಗುವುದು. ಪಾಠದ ಜೊತೆಗೆ ಮಕ್ಕಳಿಗೆ ಸಂಗೀತ ,ಕ್ರೀಡೆ, ಮನರಂಜನೆಯನ್ನು ಕಲಿಸಬೇಕಿದೆ. ಬರೀ ಪುಸ್ತಕದಿಂದ ಕಲಿತ ವಿದ್ಯೆ ಜೀವನಕ್ಕೆ ದಾರಿ ಮಾಡುತ್ತದೆ ಶಿಕ್ಷಕರಿಂದ ಕಲಿತ ಮೌಲ್ಯಯುತ ಶಿಕ್ಷಣ ನಮ್ಮ ಬದುಕಿಗೆ ದಾರಿದೀಪವಾಗಬಲ್ಲದು.
“ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ನಮ್ಮ ಮೂಲ ಧ್ಯೇಯೋದ್ದೇಶ”
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿ ಮಾಡಲು ನಿರಂತರವಾಗಿ ಶ್ರಮಿಸುತ್ತಿದ್ದು, ಸರ್ಕಾರದ ಜೊತೆಗೂಡಿ ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಪಡಿಸಲಾಗುವುದು.ನಮ್ಮ ಊರಿನ ದೇವಾಲಯಗಳಿಗೆ ನಾವು ಎಷ್ಟು ಪ್ರಾಮುಖ್ಯತೆ ನೀಡುತ್ತಿವೋ ಅದಕ್ಕಿಂತ ಹೆಚ್ಚು ಗಮನವನ್ನು ನಮ್ಮ ಊರಿನ ಶಾಲೆಗೆ ನೀಡಿದಾಗ ಆ ಶಾಲೆಯಲ್ಲಿ ಓದಿದ ಮಕ್ಕಳೇ ಮುಂದೊಂದು ದಿನ ಆ ಊರಿನ ದೇವಸ್ಥಾನದಿಂದ ಹಿಡಿದು ಎಲ್ಲಾ ರೀತಿಯ ಅಭಿವೃದ್ಧಿಯನ್ನು ಮಾಡಬಲ್ಲರು. ಮೌಲ್ಯಯುತ ಶಿಕ್ಷಣವೆಂಬುದು ನಮ್ಮ ಬದುಕಿನ ಜೀವನಕ್ಕೆ ಕೈ ಹಿಡಿಯುತ್ತದೆ ಎಂದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ತರಗತಿ ಮಾಡಲು ಟಿ,ವಿ, ಹಾಗೂ ವಿವಿಧ ಪರಿಕರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಯಲ್ಲಪ್ಪ, ಗ್ರಾಮದ ಮುಖಂಡರಾದ ಅರುಣೇಶ್, ಹಾಗೂ ಮುಖ್ಯ ಶಿಕ್ಷಕರ ಪ್ರಕಾಶ್, ಸಹ ಶಿಕ್ಷಕರಾದ ಕವಿತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.