ಚಿತ್ರದುರ್ಗ -ದಾವಣಗೆರೆ ಪ್ರೈಮ್ ನ್ಯೂಸ್
– ತಿಥಿ ಕಾರ್ಯಕ್ಕೆ ಹೋದವರ ಮನೆಯಲ್ಲಿ ಚಿನ್ನ ದೋಚಿದ ಕಳ್ಳರು!
– ಚಿತ್ರದುರ್ಗ: 24.30 ಲಕ್ಷ ಮೌಲ್ಯದ ಒಡವೆ ಕಳ್ಳತನ: ಹೇಗೆ ಕದ್ದರು ಗೊತ್ತಾ??
– ದಾವಣಗೆರೆ : ಡೆಂಗ್ಯೂ ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕ ಸಾವು
– ಮಧ್ಯ ಕರ್ನಾಟಕದಲ್ಲೂ ಡೆಂಗ್ಯೂ ಅಬ್ಬರ: ಹುಷಾರ್ ಹುಷಾರ್
NAMMUR EXPRESS NEWS
ಚಿತ್ರದುರ್ಗ: ತಿಥಿ ಕಾರ್ಯಕ್ಕೆ ಕುಟುಂಬ ಸಮೇತ ತೆರಳಿದ್ದ ವೇಳೆ ಕಳ್ಳರು ಮನೆ ಕದ್ದ ಘಟನೆ ಹಿರಿಯೂರು ನಗರದ ಅವದಾನಿ ಬಡಾವಣೆಯಲ್ಲಿ ನಡೆದಿದ್ದು ಸುಮಾರು 24.30 ಲಕ್ಷ ಮೌಲ್ಯದ ಒಡವೆ ಕಳ್ಳತನ ಮಾಡಲಾಗಿದೆ.
ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಶಶಿಕಲಾ ಅವರು ಸಂಬಂಧಿಕರೊಬ್ಬರ ಮನೆಯಲ್ಲಿನ ತಿಥಿ ಕಾರ್ಯಕ್ಕೆ ಕುಟುಂಬ ಸಮೇತ ತೆರಳಿ ಕೊಳ್ಳೇಗಾಲಕ್ಕೆ ತೆರಳಿದ್ದರು. ದುಷ್ಕರ್ಮಿಗಳು ಮನೆ ಬೀಗ ಮುರಿದ ₹ 24.30 ಲಕ್ಷ ಮೌಲ್ಯದ ಒಡವೆ ಹಾಗೂ ₹ 25,000 ನಗದು ದೋಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಡಿವೈಎಸ್ಪಿ ಚೈತ್ರಾ, ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಕಿ, ಎಸ್ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ದಾವಣಗೆರೆ : ಡೆಂಗ್ಯೂ ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕ ಸಾವು
ದಾವಣಗೆರೆ : ತೀವ್ರ ಜ್ವರದಿಂದ ಬಳಲುತ್ತಿದ್ದ ನಗರದ ಯುವಕನೊಬ್ಬ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಡೆಂಗಿ ಶಂಕೆ ವ್ಯಕ್ತಪಡಿಸಲಾಗಿದೆ. ಕೇಶವ ನಗರದ ಅರುಣ್ (22) ಮೃತ ಯುವಕ. ಆಟೊ ಚಾಲಕನಾಗಿದ್ದ ಈತ 10 ದಿನಗಳ ಹಿಂದೆ ಜ್ವರದಿಂದ ಬಳಲಿದ್ದರಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ. ನಂತರ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದರೂ ಗುಣಮುಖನಾಗದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಭಾನುವಾರ ಸಂಜೆ ಮೃತಪಟ್ಟಿದ್ದಾನೆ. ಡೆಂಗಿ ಲಕ್ಷಣಗಳಿದ್ದವು ಎಂದು ಕುಟುಂಬದ ಮೂಲಗಳು ಹೇಳಿವೆ. ಸ್ಥಳೀಯ ಪ್ರಯೋಗಾಲಯಗಳಲ್ಲಿ ನಡೆಸಲಾದ ರಕ್ತ ಪರೀಕ್ಷೆಯಲ್ಲಿ ಡೆಂಗಿ ಖಚಿತವಾಗಿಲ್ಲ. ಯುವಕನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.