ಚಿತ್ರದುರ್ಗ ಟಾಪ್ 4 ನ್ಯೂಸ್..!
– ಕಳ್ಳತನವಾಗಿದ್ದ ಮುರುಘಾ ಶರಣರ ಬೆಳ್ಳಿ ವಿಗ್ರಹ ದಿಢೀರ್ ಪ್ರತ್ಯಕ್ಷ!
– ಡಿವೈಡರ್ ಗೆ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ
– ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ; ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!
– ಒಂದೇ ದಿನ 7 ಜನ ಸಾವು, ಶವಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ಪರದಾಟ!
NAMMUR EXPRESS NEWS
ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠದ ರಾಜಾಂಗಣದಿಂದ ಕಳ್ಳತನವಾಗಿದ್ದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ವಿಗ್ರಹ ಮಠದ ಆವರಣದಲ್ಲಿ ದಿಢೀರ್ ಪ್ರತ್ಯಕ್ಷವಾಗಿದೆ. ಕಳೆದ ವಾರ ಮಠದಲ್ಲಿದ್ದ ಬೆಳ್ಳಿ ವಿಗ್ರಹ ಕಳ್ಳತನವಾಗಿತ್ತು. ಈ ಬಗ್ಗೆ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗಿ ಮೂರು ದಿನ ಕಳೆಯುವುದರಲ್ಲಿ ನಾಪತ್ತೆಯಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ವಿಗ್ರಹ ಮಠದ ಆವರಣದಲ್ಲಿ ಕಂಡು ಬಂದಿದೆ. ಮಠದ ಆವರಣದಲ್ಲಿರುವ ಎಸ್ಜೆಎಂ ಕನ್ನಡ ಮಾಧ್ಯಮ ಶಾಲೆಯ ಬಳಿ ಮುರುಘಾ ವನಕ್ಕೆ ಹೊಂದಿಕೊಂಡಿರುವ ಕಾಂಪೌಂಡ್ ಗೋಡೆ ಬಳಿಯಲ್ಲಿ ಶರಣರ ಬೆಳ್ಳಿ ವಿಗ್ರಹವನ್ನು ಗೋಣಿ ಚೀಲದಲ್ಲಿ ತಂದು ಇಟ್ಟು ಹೋಗಿದ್ದಾರೆ. ಜೂನ್ 24 ಕೊನೆಯ ಬಾರಿ ಬೆಳ್ಳಿ ವಿಗ್ರಹ ಕಂಡು ಬಂದಿತ್ತು. ಆನಂತರ ನಾಪತ್ತೆಯಾಗಿತ್ತು. ಈ ಬಗ್ಗೆ ಮಠದ ಸಾಧಕರಾದ ವಿಜಯ ದೇವರು ಶ್ರೀ ಬಸವಪ್ರಭು ಸ್ವಾಮೀಜಿ ಗಮನಕ್ಕೆ ತಂದಿದ್ದರು. ಬಸವಪ್ರಭು ಶ್ರೀಗಳು ಹಾಗೂ ಡಾ.ಬಸವಕುಮಾರ ಸ್ವಾಮೀಜಿ ಮಠದ ಸಿಬ್ಬಂದಿಗಳನ್ನು ವಿಚಾರಿಸಿ, ಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ್ ಅವರ ಜೊತೆ ಚರ್ಚಿಸಿ ಜುಲೈ 11 ಗುರುವಾರ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸುತ್ತಿದ್ದಂತೆ ಬೆಳ್ಳಿ ವಿಗ್ರಹ ಮಠದ ಆವರಣಕ್ಕೆ ಗೋಣಿ ಚೀಲದಲ್ಲಿ ಬಂದಿದೆ. ಮಠದಲ್ಲಿ ಓಡಾಟ ಮಾಡುವವರೇ ಈ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ದೂರು ದಾಖಲಾಗುತ್ತಿದ್ದಂತೆ ವಿಗ್ರಹ ತಂದಿಟ್ಟು ಹೋಗಿರುವುದರಿಂದ ಈಗ ಅನುಮಾನಗಳು ದಟ್ಟವಾಗಿವೆ. ಮಠದ ರಾಜಾಂಗಣದಿಂದಲೇ ಕಳ್ಳತ ಮಾಡಿರುವ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಮಾಡಬೇಕು ಎಂದು ಮಠದ ಭಕ್ತರು ಆಗ್ರಹಿಸಿದ್ದಾರೆ.
ಉಡುಗೊರೆಯಾಗಿ ಬಂದಿದ್ದ 25 ಲಕ್ಷದ ಬೆಳ್ಳಿ ವಿಗ್ರಹ:
ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದ ಶೂನ್ಯಪೀಠಾರೋಹಣ ಮಾಡಿ 25 ವರ್ಷಗಳ ಸಂಭ್ರಮದ ನೆನಪಿಗಾಗಿ ಮಠದ ಭಕ್ತರು 22 ಕೆ.ಜಿ ತೂಕದ ಸುಮಾರು ಇಂದಿನ ಮಾರುಕಟ್ಟೆ ಬೆಲೆಯ 25 ಲಕ್ಷ ರೂ. ವೆಚ್ಚದ ಬೆಳ್ಳಿ ವಿಗ್ರಹವನ್ನು ಕೊಡುಗೆಯಾಗಿ ನೀಡಿದ್ದರು.
ಡಿವೈಡರ್ ಗೆ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ
ಚಿತ್ರದುರ್ಗ: ನಿದ್ರೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಗೋಪಿನಾಥ್ (52), ಲಲಿತಮ್ಮ (47) ಮೃತ ದುರ್ದೈವಿಗಳು. ಬೆಂಗಳೂರಿನಲ್ಲಿ ಉಪನಯನ ಕಾರ್ಯಕ್ರಮ ಮುಗಿಸಿ, ಬಳ್ಳಾರಿಗೆ ತೆರಳುವ ವೇಳೆ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಶ್ರೇಯ, ಶ್ರೀನಿವಾಸ್ ಹಾಗೂ ಚಾಲಕ ಸುರೇಶ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಳಕು ಪಿಎಸ್ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ; ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!
ಚಿತ್ರದುರ್ಗ: ಅನೈತಿಕ ಸಂಬಂಧಕ್ಕೆ ವ್ಯಕ್ತಿಯೊಬ್ಬ ಬರ್ಬರ ಹತ್ಯೆಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾ. ಹುಲಗಲಕುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರವಿಕುಮಾರ್ (35) ಕೊಲೆಯಾದವನು. ರವಿಕುಮಾರ್ ಮಲಗಿದ್ದಾಗ ಕಲ್ಲು ಎತ್ತಿಹಾಕಿ ಕೊಲೆ ಸುನೀಲ್ ಎಂಬಾತ ಕೊಲೆ ಮಾಡಿದ್ದಾನೆ. ರವಿ ಪತ್ನಿ ಜತೆ ಆರೋಪಿ ಸುನೀಲ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ರವಿಗೆ ತಿಳಿಯಿತು ಎಂದು ಸುನೀಲ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆ ಬಳಿಕ ಆರೋಪಿ ಸುನೀಲ್ನನ್ನು ಪೊಲೀಸರು ವಶಕ್ಕೆ ಪಡೆಡಿದ್ದಾರೆ. ಸ್ಥಳಕ್ಕೆ ಪಿಎಸ್ಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಒಂದೇ ದಿನ 7 ಜನ ಸಾವು, ಶವಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ಪರದಾಟ!
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಹೊಸ ಕುಂದವಾಡ ಗ್ರಾಮದಲ್ಲಿ ಒಂದೇ ದಿನ ವಿವಿಧ ಕಾರಣಕ್ಕೆ ಏಳು ಜನರು ಮೃತಪಟ್ಟಿದ್ದು, ಅಂತ್ಯಕ್ರಿಯೆಗೆ ಸ್ಮಶಾನ ವಿಲ್ಲದೆ ಕುಟುಂಬಸ್ಥರು ಪರದಾಡಿದರು. 3,000 ಜನಸಂಖ್ಯೆ ಹೊಂದಿರುವ ಹೊಸ ಕುಂದುವಾಡದಲ್ಲಿ ಸ್ಮಶಾನವಿಲ್ಲ. ಈ ಬಗ್ಗೆ ಜನರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಹೊಸ ಕುಂದವಾಡ ನಿವಾಸಿಗಳು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪಾಲಿಕೆ ಆಯುಕ್ತರು, ಅಧಿಕಾರಿಗಳು ಬರುವಂತೆ ಆಗ್ರಹಿಸಿದರು. ಹೊಸ ಕುಂದವಾಡ ಗ್ರಾಮದಲ್ಲಿ ಇಂದು (ಜು.12) ಒಂದೇ ದಿನ ಎರಡು ದಿನದ ನವಜಾತ ಶಿಶು ಸೇರಿದಂತೆ 7 ಜನ ಮೃತಪಟ್ಟಿದ್ದಾರೆ. ನಾಲ್ಕು ಜನ ವಯೋಸಹಜದಿಂದ ಸಾವನಪ್ಪಿದ್ದು, ಮೂರು ಜನ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಾರಿಯಕ್ಕ (70), ಸಂತೋಷ (30), ಈರಮ್ಮ (60), ಸುನಿಲ್ (25), ಶಾಂತಮ್ಮ (65) ಬಿಮಕ್ಕ (70) ಮೃತ ದುರ್ದೈವಿಗಳು.
ಇಲ್ಲಿವರೆಗೂ ಹೊಸ ಕುಂದವಾಡ ಗ್ರಾಮಸ್ಥರು ಪಕ್ಕದ ಹಳೆ ಕುಂದವಾಡ ಊರಿಗೆ ಹೋಗಿ ಶವಸಂಸ್ಕಾರ ಮಾಡುತ್ತಿದ್ದರು. ಆದರೆ, ಇತ್ತಿಚೆಗೆ ಹಬ್ಬದ ವಿಚಾರವಾಗಿ ಎರಡು ಗ್ರಾಮಸ್ಥರ ಮಧ್ಯೆ ಮನಸ್ತಾಪವಾಗಿದೆ. ಮನಸ್ತಾಪ ಹಿನ್ನೆಲೆಯಲ್ಲಿ ಹಳೆ ಕುಂದವಾಡ ಗ್ರಾಮಸ್ಥರು ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ಗ್ರಾಮದಲ್ಲಿ ನೀವು ಶವಸಂಸ್ಕಾರ ಮಾಡಿ ಎಂದು ಹೇಳಿದ್ದಾರೆ. ಹೀಗಾಗಿ ಹೊಸ ಕುಂದವಾಡ ಗ್ರಾಮಸ್ಥರು ಶವಸಂಸ್ಕಾರಕ್ಕೆ ಜಾಗವಿಲ್ಲ ಪರದಾಡಿದರು.