ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಉನ್ನತ ತನಿಖೆಗೆ ಪಟ್ಟು
– ಹೊಸದುರ್ಗದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದಿಂದ ರಾಷ್ಟ್ರಪತಿ, ಸಿಎಂಗೆ ಮನವಿ
– ಮುಖಂಡರು ಹೇಳಿದ್ದೇನು…?
NAMMUR EXPRESS NEWS
ಹೊಸದುರ್ಗ: ಕಳೆದ ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮದ ಸದ್ದು ಬಹಳ ಜೋರಾಗಿಯೇ ಕೇಳಿ ಬರುತ್ತದೆ. ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಎಸ್ಐಟಿ ಅಧಿಕಾರಿಗಳು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿವೆ. ವಾಲ್ಮೀಕಿ ನಾಯಕ ಜನಾಂಗದ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿ ವೇತನ, ವಾಲ್ಮೀಕಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿದ್ದ ಹಣ, ಪ್ರಭಾವಿಗಳ ಪಾಲಾಗಿರುವುದು ಬಹಳ ನೋವಿನ ಸಂಗತಿ ಎಂದು ಹೊಸದುರ್ಗದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದಿಂದ ರಾಷ್ಟ್ರಪತಿ, ಸಿಎಂಗೆ ಮನವಿ ಸಲ್ಲಿಸಿದೆ.
ವಾಲ್ಮೀಕಿ ಮಹಾ ಸಭಾ ಯುವ ಮುಖಂಡ ಮಳಲಿ ವಿಜಯಕುಮಾರ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವರು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು. ತನಿಖೆ ಎಲ್ಲಾ ಆಯಾಮಗಳಲ್ಲೂ ನಡೆಯಬೇಕಿದ್ದು ಈ ಪ್ರಕರಣವನ್ನು ಕೂಡಲೇ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಸಿಬಿಐ ಗೆ ವಹಿಸಬೇಕು. ನಮಗೆ ಸಂಪೂರ್ಣವಾಗಿ ಕೇಂದ್ರೀಯ ತನಿಖಾ ದಳ ಸಿಬಿಐ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಈ ಕೇಸ್ ಅನ್ನು ಸರ್ಕಾರ ಸಂಪೂರ್ಣವಾಗಿ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ನಾಯಕ ಸಮಾಜದ ಯುವ ಮುಖಂಡ ಅರುಣ್ ಗಂಗಾಧರಪ್ಪ ಮಾತನಾಡಿ, ನಮ್ಮ ವಾಲ್ಮೀಕಿ ನಾಯಕ ಸಮುದಾಯ ಆರ್ಥಿಕವಾಗಿ ಬಹಳ ಹಿಂದುಳಿದಿದ್ದು, ಇಂದಿಗೂ ಕೂಡ ಬಡತನದಲ್ಲಿಯೇ ಜೀವನ ಮಾಡುವಂತಹ ಕುಟುಂಬಗಳು ಬಹಳಷ್ಟಿವೆ. ಬಡ ಜನರ ಅಭ್ಯುದಾಯಕ್ಕಾಗಿ ಬಳಕೆಯಾಗಬೇಕಾಗಿದ್ದ ಹಣ, ಭ್ರಷ್ಟರ ಪಾಲಾಗಿರುವುದು ತುಂಬಾ ಬೇಸರ ಉಂಟು ಮಾಡಿದೆ. ತನಿಖೆ ವೇಳೆ ಒಂದೊಂದೇ ಅಂಶಗಳು ಹೊರ ಬರುತ್ತಿವೆ. ಎಂತಹ ದೊಡ್ಡ ವ್ಯಕ್ತಿಯಾಗಿದ್ದರರೂ ಅಂತವರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು. ಅಕ್ರಮವಾಗಿ ವರ್ಗಾವಣೆ ಆಗಿರುವ ವಾಲ್ಮೀಕಿ ನಿಗಮದ ಹಣ ಬಡ ಜನರ ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾಗಿ ಬಳಕೆಯಾಗಬೇಕು. ಸಮುದಾಯದ ಜನರಿಗೆ ಅನ್ಯಾಯವಾಗಲು ಬಿಡಲಾರೆವು. ತನಿಖಾ ಸಂಸ್ಥೆಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬೇಕೆಂದು ಆಗ್ರಹಿಸಿದರು. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಪದಾಧಿಕಾರಿಗಳಾದ ಶಶಿಧರ್, ಲೋಹಿತ್, ಸಿದ್ದೇಶ್, ರೂಪೇಶ್ ಮತ್ತು ಚೇತನ್ ಮೂರ್ತಿ ಸೇರಿದಂತೆ ಇತರರಿದ್ದರು.