ಚಿತ್ರದುರ್ಗ ಟಾಪ್ 5 ನ್ಯೂಸ್..!
– ಚಿತ್ರದುರ್ಗ: ಹೆದ್ದಾರಿಯಲ್ಲಿ ಕರಡಿ ಸಾವು.!
– ದರ್ಶನ್ ಗ್ಯಾಂಗ್ನ 4ನೇ ಆರೋಪಿ ತಾಯಿ ನಿಧನ
– ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ!
– ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ
– ದಾವಣಗೆರೆ: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು!
NAMMUR EXPRESS NEWS
ಚಿತ್ರದುರ್ಗ: ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಕ್ಯಾದಿಗೆರೆಯಿಂದ ಸೀಬಾರ ಬೈಪಾಸ್ನಲ್ಲಿ ವಾಹನವೊಂದು ಡಿಕ್ಕಿಯಾಗಿ ಕರಡಿ ಮೃತಪಟ್ಟಿದೆ.
ತಮಟಕಲ್ಲು ಬಳಿ ಹೆದ್ದಾರಿಯ ಬೈಪಾಸ್ನಲ್ಲಿ ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಕರಡಿ ಸ್ಥಳದಲ್ಲೇ ಮೃತಪಟ್ಟಿದೆ. ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಸುತ್ತಲೂ ಬೆಟ್ಟ ಗುಡ್ಡಗಳಿರುವುದರಿಂದ ಕರಡಿ ಸೇರಿದಂತೆ ವನ್ಯಜೀವಿಗಳು ಅತ್ತಿಂದಿತ್ತ ಓಡಾಡುವುದು ಸಾಮಾನ್ಯ.
ಆದರೆ, ಹೊಸದಾಗಿ ನಿರ್ಮಾಣವಾಗಿರುವ ಹೆದ್ದಾರಿಯಲ್ಲಿ ಈ ಪ್ರಾಣಿಗಳು ಸಂಚರಿಸುವಾಗ ಅಪಘಾತಗಳಾಗುತ್ತಿರುವುದು ಆತಂಕದ ವಿಚಾರವಾಗಿದೆ. ಈ ಹಿಂದೆಯೂ ಸಾಕಷ್ಟು ಅಪಘಾತಗಳು ಇಲ್ಲಿ ಸಂಭವಿಸಿದ್ದು, ವನ್ಯಜೀವಿಗಳು ಜೀವ ಕಳೆದುಕೊಳ್ಳುತ್ತಿವೆ.
ದರ್ಶನ್ ಗ್ಯಾಂಗ್ನ 4ನೇ ಆರೋಪಿ ತಾಯಿ ನಿಧನ
ಚಿತ್ರದುರ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಅವರ ಗ್ಯಾಂಗ್ ಕೂಡ ಜೈಲುವಾಸ ಅನುಭವಿಸುತ್ತಿದೆ. ದರ್ಶನ್ ಗ್ಯಾಂಗ್ನ ನಾಲ್ಕನೇ ಆರೋಪಿಯ ತಾಯಿ ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ದರ್ಶನ್ ಗ್ಯಾಂಗ್ನ ಆರೋಪಿ ರಾಘವೇಂದ್ರ ಅಲಿಯಾಸ್ ರಘು ತಾಯಿ ಮಂಜುಳಮ್ಮ (75) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ರಾಘವೇಂದ್ರ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಬಂಧನಕ್ಕೂ ಮುಂಚೆ ರಘು ಪ್ರೇಮ ವಿವಾಹವಾಗಿ ಮನೆಯಿಂದ ಹೊರಗಿದ್ದರು. ಅವರ ಸಹೋದರ ಮುರುಳಿ ಮದುವೆಯಾಗದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ರಘು ಆಗಾಗಿ ಆಗಮಿಸಿ ತಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ಆದರೀಗ ಜೈಲು ಸೇರಿದಾಗಿನಿಂದ ರಘು ತಾಯಿಯನ್ನು ನೋಡಲಾಗಿರಲಿಲ್ಲ.
ತಾಯಿ ಮಂಜುಳಮ್ಮ ಮಗ ರಘು ಅವರ ಕೊನೆಯ ಮುಖ ನೋಡದೆ ಕೊನೆಯುಸಿರೆಳೆದಿದ್ದಾರೆ. ರಾಘವೇಂದ್ರ ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದಾರೆ. ಅವರು ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಜನರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಪೈಕಿ ನಾಲ್ಕನೇ ಆರೋಪಿ ರಾಘವೇಂದ್ರ ಕೂಡ ಒಬ್ಬರಾಗಿದ್ದಾರೆ. ಆಗಸ್ಟ್ ಒಂದರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ!
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅಂಬಲಗೆರೆ ಗ್ರಾಮದಲ್ಲಿ ಬೇಲಿಯ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ.ಆಟವಾಡುತ್ತಾ ಮಕ್ಕಳು ವಿಷದ ಕಾಯಿ ತಿಂದಿದ್ದಾರೆ. ಪರಿಣಾಮ 6 ಜನ ಮಕ್ಕಳು ಅಸ್ವಸ್ಥರಾಗಿದ್ದಾರೆ. ಪ್ರಕೃತಿ, ಮುಖೇಶ್, ಅನುಶ್ರೀ, ರಾಕೇಶ್, ಸಿಂಧು, ಮಹಾಲಕ್ಷ್ಮಿ ಅಸ್ವಸ್ಥ ಮಕ್ಕಳು. ಕಾಯಿ ತಿನ್ನುತ್ತಿದ್ದಂತೆ ಮಕ್ಕಳಲ್ಲಿ ವಾಂತಿ, ಬೇಧಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಬಳಿಕ ಅಸ್ವಸ್ಥಗೊಂಡ ಮಕ್ಕಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ
ಚಿತ್ರದುರ್ಗ: ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ಮೆದೇಹಳ್ಳಿಯಲ್ಲಿ ನಡೆದಿದೆ. ರಫಿವುಲ್ಲಾ ಮತ್ತು ಅಪ್ಪದ್ ಬಾನು ಬಂಧಿತ ಆರೋಪಿಗಳು. ವೇಶ್ಯಾವಾಟಿಕೆ ಕಿಂಗ್ ಪಿನ್ ನೀಲು ಫರಾನ್ ಪರಾರಿಯಾಗಿದ್ದಾನೆ. ಮೆದೇಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸಿಇಎನ್ ಠಾಣೆ ಪಿಐ ವೆಂಕಟೇಶ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ,ಇಬ್ಬರನ್ನು ಬಂಧಿಸಿ ಪಶ್ಚಿಮ ಬಂಗಾಳದ ಓರ್ವ ಯುವತಿ ಸೇರಿ 6 ಜನರ ರಕ್ಷಣೆ ಮಾಡಿದ್ದಾರೆ. ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು, ರಾಜ್ಯದಲ್ಲಿ ಡೆಂಗ್ಯು ಸಾವು 9ಕ್ಕೆ ಏರಿಕೆ
ದಾವಣಗೆರೆ: ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಡೆಂಗ್ಯು ಜ್ವರದಿಂದ ಸಾವನ್ನಪ್ಪಿರುವ ಶಂಕೆ ಇದ್ದು, ಪರೀಕ್ಷಾ ವರದಿ ಬರಬೇಕಿದೆ. ರೇಖಾ ಎನ್ (19) ಸಾವನ್ನಪ್ಪಿದ ಯುವತಿ. ದಾವಣಗೆರೆ ಜಿಲ್ಲೆಯ ಜಗಳೂರ ಪಟ್ಟಣದ ರಾಮಾಲಯ ರಸ್ತೆ ನಿವಾಸಿ ರೇಖಾ ಕಳೆದ ಕೆಲ ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು.
ಅಲ್ಲಿ ತೀವ್ರ ಜ್ವರದಿಂದ ಬಳಲಿದ್ದ ರೇಖಾಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಬಳ್ಳಾರಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕೃತ ವರದಿ ನಿರೀಕ್ಷಿಸಲಾಗಿದೆ. ಈ ಬಗ್ಗೆ ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಮಾಹಿತಿ ನೀಡಿದ್ದಾರೆ.