ನಾಲ್ಕು ವಾರ ಮಳೆ ಅಲರ್ಟ್!
– ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
– ಮಲೆನಾಡು, ಕರಾವಳಿ ಸೇರಿ ಎಲ್ಲಾ ಕಡೆ ಮಳೆ
NAMMUR EXPRESS NEWS
ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಇನ್ನು ಸೆಪ್ಟೆಂಬರ್ ತಿಂಗಳು ಆರಂಭದಿಂದ ಇಲ್ಲಿಯವರೆಗೂ ಕರಾವಳಿ ಜಿಲ್ಲೆಗಳ ಕೆಲವೆಡೆ ಹಾಗೂ ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಾತ್ರ ಆಗಾಗ ಮಳೆ ಸುರಿಯುತ್ತಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬರೀ ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಇನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಕರ್ನಾಟಕದ ಮುಂದಿನ ನಾಲ್ಕು ವಾರಗಳ ಹವಾಮಾನ ವರದಿ ನೀಡಿದ್ದು, ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ.
ಮುಂದಿನ ನಾಲ್ಕು ವಾರಗಳ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಆಗ್ನೇಯ ಭಾರತದಿಂದ ನೈಋತ್ಯ ಮಾನ್ಸೂನ್ ಮುಂದಿನ ವಾರದಿಂದ ಚಲಿಸಲಿದೆ. ಅಕ್ಟೋಬರ್ 2 ರಿಂದ ಮಧ್ಯಭಾರತದಿಂದ ಸಾಗಲಿದೆ. ಅಕ್ಟೋಬರ್ ಕೊನೆಯ ವಾರದವರೆಗೆ ರಾಜ್ಯದಲ್ಲಿ ಮಳೆ ಇರಲಿದ್ದು, ನಂತರ ಮುಂಗಾರು ಮುಕ್ತಾಯವಾಗಲಿದೆ ಎಂದು ಹೇಳಿದೆ. ಅಕ್ಟೋಬರ್ ತಿಂಗಳ ಮೊದಲ ಮೂರು ವಾರಗಳ ಕಾಲ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾದರೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
3 ದಿನ ಭಾರೀ ಮಳೆ
ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು, ಮಿಂಚು ಸಹಿತ ಮಳೆ ಮುನ್ಸೂಚನೆ ಇದೆ.
ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರಕ್ಕೂ ಮಳೆ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಪಶ್ಚಿಮ ಭಾಗದಲ್ಲಿ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.