ಟಾಪ್ 4 ನ್ಯೂಸ್ ಕರ್ನಾಟಕ
ಕಲಬುರಗಿ: ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಇಳಿದಾಗ ಕೊಚ್ಚಿ ಹೋದ ಯುವತಿ
– ಬಾಗಲಕೋಟೆ: ಗೂಡ್ಸ್ ವಾಹನಗಳ ಮುಖಾಮುಖಿ ಡಿಕ್ಕಿ
– ಬಳ್ಳಾರಿ : ಪಾಲಿಕೆಯ ಮುಂಭಾಗದಲ್ಲೇ ಕಾರ್ಪೊರೇಟರ್ಗೆ ಪ್ರಜ್ಞೆ ತಪ್ಪುವಂತೆ ಹಲ್ಲೆ
– ಗದಗ: ಕೊಡಲಿಯಿಂದ ಯುವಕನ ಮೇಲೆ ಹಲ್ಲೆ
NAMMUR EXPRESS NEWS
ಕಲಬುರಗಿ: ನದಿಯಲ್ಲಿ ಸ್ನಾನ ಮಾಡುವಾಗ ಯುವತಿಯೊಬ್ಬಳು ನೀರುಪಾಲಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಬಳಿಯ ಭೀಮಾ ನದಿಯಲ್ಲಿ ಘಟನೆ ನಡೆದಿದೆ. ಶೈಲಿ ಗೋಡೆ (23) ಮೃತ ದುರ್ದೈವಿ. ಮಹಾರಾಷ್ಟ್ರದ ದೌಂಡ್ ತಾಲೂಕಿನ ವಂಡಅಡವಿ ಗ್ರಾಮದ ಶೈಲಿ, ಕುಟುಂಬ ಸಮೇತ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕೆ ಆಗಮಿಸಿದ್ದರು. ದರ್ಶನಕ್ಕೂ ಮುನ್ನ ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ತೆರಳಿದ್ದರು. ಭೀಮಾ ನದಿಯ ಚಕ್ರೇಶ್ವರ ತೀರ್ಥದಲ್ಲಿ ಸ್ನಾನ ಮಾಡಲು ತೆರಳಿದ್ದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಮತ್ತು ಪೊಲೀಸರು ಭೇಟಿ ನೀಡಿ ನೀರಿನೊಳಗೆ ಇದ್ದ ಶವವನ್ನು ಹೊರಗೆ ತಗೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದೇವಲಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
– ಬಾಗಲಕೋಟೆ: ಗೂಡ್ಸ್ ವಾಹನಗಳ ಮುಖಾಮುಖಿ ಡಿಕ್ಕಿ
ಬಾಗಲಕೋಟೆ: ಟಾಟಾ ಏಸ್ – ಮಹಿಂದ್ರಾ ಗೂಡ್ಸ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಾಗಲಕೋಟೆಯ ತೇರದಾಳ ಪಟ್ಟಣದ ಕಲೂತಿ ನಗರದ ಬಳಿ ಘಟನೆ ನಡೆದಿದೆ. ಟಾಟಾ ಏಸ್ ವಾಹನವು ತೇರದಾಳದಿಂದ ರಬಕವಿ ಕಡೆ ಹೊರಟಿದ್ದರೆ, ಮಹಿಂದ್ರಾ ಗೂಡ್ಸ್ ವಾಹನ ಜಮಖಂಡಿಯಿಂದ ಹಾರೂಗೇರಿ ಕಡೆ ಹೊರಟಿತ್ತು. ಜಮಖಂಡಿ ಕಾಗವಾಡ ರಾಜ್ಯ ಹೆದ್ದಾರಿಯಲ್ಲಿ ಬರುವ ಕಲೂತಿ ನಗರದಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕರಿಬ್ಬರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ತೇರದಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಬಳ್ಳಾರಿ : ಪಾಲಿಕೆಯ ಮುಂಭಾಗದಲ್ಲೇ ಕಾರ್ಪೊರೇಟರ್ಗೆ ಪ್ರಜ್ಞೆ ತಪ್ಪುವಂತೆ ಹಲ್ಲೆ
ಬಳ್ಳಾರಿ : ಬಳ್ಳಾರಿಯ ಮಹಾನಗರ ಪಾಲಿಕೆ ಆವರಣದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪಾಲಿಕೆ ಸದಸ್ಯನ ಮೇಲೆ ಹಲ್ಲೆ ನಡೆಸಲಾಗಿದೆ. ಪಾಲಿಕೆ ಸದಸ್ಯರ ಸಂಬಂಧಿ ರವಿ ಮತ್ತು ಪಾಲಿಕೆ ಸದಸ್ಯ ಕುಬೇರನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. 38ನೇ ವಾಡ್೯ನ ಪಾಲಿಕೆ ಸದಸ್ಯ ಕುಬೇರ ಮೇಲೆ ಹಲ್ಲೆ ನಡೆದಿದೆ. 39ನೇ ವಾರ್ಡ್ನ ಪಾಲಿಕೆ ಸದಸ್ಯೆಯ ಮೈದುನ ಆಗಿರುವ ರವಿ, ನಿನ್ನೆ ಮೇಯರ್ ಚೇಂಬರ್ನಲ್ಲಿ ಕುಬೇರ್ ಜತೆಗೆ ಗಲಾಟೆ ಮಾಡಿಕೊಂಡಿದ್ದ. ಅಲ್ಲಿದ್ದವರು ಸಮಾಧಾನಪಡಿಸಿ ಎಲ್ಲರನ್ನು ಹೊರಗೆ ಕಳಿಸಿದ್ದರು. ಇತ್ತ ಪಾಲಿಕೆಯಿಂದ ಹೊರಬರುತ್ತಿದ್ದಂತೆ ಕುಬೇರನ ಮೇಲೆ ರವಿ ಆ್ಯಂಡ್ ಗ್ಯಾಂಗ್ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಕುಬೇರ ಹಾಗೂ ನಾಗರಾಜ ಎಂಬುವವರ ಮೇಲೆ ಹಲ್ಲೆ ಮಾಡಿರುವ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ಬಳಿಕ ಇ ಕುಬೇರ ಮತ್ತು ವೀರೇಂದ್ರ ವಿಮ್ಸ್ನ ಟ್ರಾಮಾ ಕೇರ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಟ್ರಾಮಾ ಕೇರ್ಗೆ ಬರುತ್ತಿದ್ದಂತೆ ಗುಂಪು ಕಟ್ಟಿಕೊಂಡು ಬಂದು ರವಿ ಗ್ಯಾಂಗ್ ಮತ್ತೆ ಕುಬೇರ, ನಾಗರಾಜು, ವೀರೇಂದ್ರ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಪಾಲಿಕೆ ಸದಸ್ಯ ಕುಬೇರನ ಕಣ್ಣು, ಹೊಟ್ಟೆ, ಬೆನ್ನು, ಕೈ ಭಾಗಕ್ಕೆ ಪೆಟ್ಟಾಗಿದೆ. ನಾಗರಾಜ ಕುತ್ತಿಗೆ, ಹಲ್ಲು, ಕಾಲುಗಳಿಗೆ ಗಾಯವಾಗಿದೆ. ಹಲ್ಲೆ ಬಳಿಕ ಕುಬೇರ ಅವರಿಗೆ ಪ್ರಜ್ಞೆ ತಪ್ಪಿದ ಹಿನ್ನೆಲೆ ನಿಖರ ಕಾರಣ ತಿಳಿದುಬಂದಿಲ್ಲ. ಹಲ್ಲೆ ಪರಿಣಾಮ ಬಳ್ಳಾರಿ ಟ್ರಾಮಾ ಕೇರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಲಿಕೆ ಮುಂಭಾಗದಲ್ಲೆ ಕಾರ್ಪೊರೇಟರ್ಗೆ ಥಳಿಸಿದ್ದಕ್ಕೆ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ಕೇಸು ಕೌಂಟರ್ ಕೇಸು ದಾಖಲಾಗಿದೆ. ರವಿ ಮತ್ತು ಗೋವಿಂದರಾಜುಲು ಸೇರಿದಂತೆ ಇತರರ ಮೇಲೆ ಕೊಲೆ ಯತ್ನದ ಕೇಸ್ ಹಾಗೂ ಕುಬೇರ ಮತ್ತು ಗಾದಿಲಿಂಗನ ಮೇಲೆ ಹಲ್ಲೆಯ ಕೇಸು ದಾಖಲಾಗಿದೆ.
– ಗದಗ: ಕೊಡಲಿಯಿಂದ ಯುವಕನ ಮೇಲೆ ಹಲ್ಲೆ
ಗದಗ : ಕೊಡಲಿಯಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜುನಾಥ ಬೇಲೇರಿ ಆ್ಯಂಡ್ ಗ್ಯಾಂಗ್ ಸೇರಿಕೊಂಡು ಗ್ರಾಮದ ಸುರೇಶ್ ಬೇಲೇರಿ ಎಂಬಾತನ ತಲೆಗೆ ಕೊಡಲಿಯಿಂದ ಹೊಡೆದಿದ್ದಾರೆ. ಸುರೇಶ್ ಗಂಭೀರವಾಗಿ ಗಾಯಗೊಂಡರೆ, ಜತೆಗಿದ್ದ ಯಶವಂತ ಬೆಲೇರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳು ಸುರೇಶ್ ಗದಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಯಶವಂತಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಇಬ್ಬರು ಮಹಿಳೆಯರು ಸೇರಿ ಐವರಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಮಂಜುನಾಥ್, ಅಜ್ಜಪ್ಪ ಸೇರಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.