ಹಾಸನದಲ್ಲಿ ಧಾರಾಕಾರ ಮಳೆ!
– ಜನ ಜೀವನ ಅಸ್ತವ್ಯಸ್ತ: ಜನರಿಗೆ ತೊಂದರೆ
– ಒಂದು ವಾರದಿಂದ ಜಿಲ್ಲೆಯಲ್ಲಿ ಸತತವಾಗಿ ಮಳೆ
NAMMUR EXPRESS NEWS
ಹಾಸನ: ನಗರದ ವಿವಿಧೆಡೆ ಇಂದು ಧಾರಾಕಾರ ಮಳೆ ಸುರಿಯಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ
ಇತ್ತು. ಮಧ್ಯಾಹ್ನದ ವೇಳೆಗೆ ಧೋ ಎಂದು ಮಳೆ ಸುರಿಯಲಾರಂಭಿತು. ಸುಮಾರು ಅರ್ಧಗಂಟೆಯಿಂದ ಒಂದು ಗಂಟೆವರೆಗೂ ಎಡೆಬಿಡದೆ ಜೋರು ಮಳೆ ಸುರಿಯಿತು. ಇದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ವೀಕೆಂಡ್ ಆಗಿದ್ದರಿಂದ ಅನೇಕರು ತೊಂದರೆ ಅನುಭವಿಸಿದರು. ಮಧ್ಯಾಹ್ನದ ಊಟಕ್ಕೆ ಮನೆ ಅಥವಾ ಬೇರೆಡೆಗೆ ಹೋಗಬೇಕಿದ್ದವರಿಗೆ ತೀವ್ರ ತೊಂದರೆ ಅನುಭವಿಸಿದರು. ಶಾಲೆಗಳಿಗೆ ದಸರೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಬಚಾವಾದರು. ಆದರೂ ಕೆಲ ಶಾಲೆಗಳಲ್ಲಿ ತರಗತಿ ನಡೆಯುತ್ತಿರುವುದರಿಂದ ಅಂಥ ಮಕ್ಕಳು ತೊಂದರೆ ಅನುಭವಿಸಿದರು.
ಕೇವಲ ಹಾಸನ ನಗರ ಮಾತ್ರವಲ್ಲದೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಭಾಗದಲ್ಲಿ ಜೋರು ಮಳೆ ಸುರಿಯಿತು.
ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಅಕ್ಷರಶಃ ಪರದಾಡಿದರು. ಸಣ್ಣ ಪುಟ್ಟ ಕೆಲಸಕ್ಕೆ ಹೋಗ ಬೇಕಿದ್ದವರು ಗಂಟೆಗಟ್ಟಲೆ ಕಾಯುತ್ತಾ ಕೂರ ಬೇಕಾಯಿತು. ಈಗಲೂ ಸಹ ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇದ್ದು, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ಒಂದೆರಡು ದಿನ ಮಳೆ ಆಗುವ ಸಾಧ್ಯತೆ ಇದೆ. ಈಗಾಗಲೇ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಮಳೆ ಅರೆಮಲೆನಾಡು ಮತ್ತು ಬಯಲು ಸೀಮೆಯ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಕಾಫಿ ಮೊದಲಾದ ಬೆಳೆ ಕಳೆದುಕೊಂಡು ಮಲೆನಾಡು ಭಾಗದ ರೈತರು ತೊಂದರೆಗೆ ಸಿಲುಕಿದ್ದಾರೆ.