ಟಾಪ್ ನ್ಯೂಸ್ ಮಲ್ನಾಡ್
– ಚಿಕ್ಕಮಗಳೂರು: ವಾಮಾಚಾರ ಮಡಿಕೆಗೆ ಕಾಳಿ ರೂಪ
– ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಚಿನ್ನ ಹೂತಿಟ್ಟಿದ್ದ ಆರೋಪಿ ಅರೆಸ್ಟ್!
NAMMUR EXPRESS NEWS
ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ಭಯಂಕರ ವಾಮಾಚಾರಕ್ಕೆ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ಬೆಚ್ಚಿಬಿದ್ದಿದೆ. ಮೂರು ದಾರಿ ಕೂಡಿರುವ ಕಡೆ ಕಿಡಿಗೇಡಿಗಳು ಮಡಿಕೆಗೆ ಮೂರ್ತಿ ರೂಪ ಕೊಟ್ಟು ವಾಮಾಚಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದ ಚೇತನ್ ಎಂಬವರ ಮನೆ ಹಾಗೂ ಚೇತನ್ ಮನೆಯ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ಮಾಡಿದ್ದಾರೆ. ಒಂದು ಗುಚ್ಚು ಹಸಿರು ಬಳೆಯ ಮೇಲೆ ಮಣ್ಣಿನ ಮಡಕೆ ಕೂರಿಸಿ, ಆ ಮಡಿಕೆಗೆ ಗೊಂಬೆ ರೂಪ ನೀಡಿ ಕಾಳಿಯ ಮುಖದಂತೆ ಮಾಡಿ ಮಾಟ ಮಾಡಿದ್ದಾರೆ. ಬೆಳಗಿನ ಜಾವ 4 ರಿಂದ 5 ಗಂಟೆ ಸುಮಾರಿಗೆ ಐವರು ಕಿಡಿಗೇಡಿಗಳ ಈ ದುಷ್ಕೃತ್ಯವನ್ನ ಸ್ಥಳೀಯರು ತಮ್ಮ ಮನೆಯ ಒಳಭಾಗದಿಂದ ನೋಡಿದ್ದಾರೆ. ಆದರೆ, ಯಾರೋ? ಏನೋ? ಎಂದು ಹೋಗಲು ಭಯಗೊಂಡು ಮನೆಯಲ್ಲೇ ಇದ್ದರು. ಬೆಳಗ್ಗೆ ನೋಡಿದಾಗ ಮಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಮಾಟದ ಜಾಗದಲ್ಲಿ ಅರಿಶಿನ-ಕುಂಕುಮ, ಹಣ್ಣು-ಕಾಯಿ ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಮಾಟ ಮಾಡುವವರು ಪ್ರಾಣಿ ಬಲಿ ನೀಡಿ ಮಾಟ ಮಾಡುತ್ತಾರೆ. ಆದರೆ ಹಸಿರು ಬಳೆ ಮೇಲೆ ಮಡಿಕೆಗೆ ಮಣ್ಣಿನ ರೂಪದಲ್ಲಿ ಕಾಳಿಯಂತೆ ಮಾಡಿ ವಾಮಾಚಾರ ಮಾಡಿರುವುದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
– ತೀರ್ಥಹಳ್ಳಿ : ಬೆಂಗಳೂರಿನಲ್ಲಿ ಚಿನ್ನ ಕಳ್ಳತನ ಮಾಡಿ ತೀರ್ಥಹಳ್ಳಿಯಲ್ಲಿ ಹೂತಿಟ್ಟಿದ್ದ ಆರೋಪಿ ಬಂಧನ
ತೀರ್ಥಹಳ್ಳಿ: ಬೆಂಗಳೂರಿನಲ್ಲಿ ಚಿನ್ನವನ್ನ ಕದ್ದು ತೀರ್ಥಹಳ್ಳಿಯಲ್ಲಿ ತಂದಿಟ್ಟಿದ್ದ ಆರೋಪಿಯನ್ನ ಮಾಗಡಿ ಪೋಲೀಸರು ತೀರ್ಥಹಳ್ಳಿಗೆ ಕರೆತಂದಿದ್ದ ಘಟನೆ ನಡೆದಿದೆ. ಹಂಜ ಎಂಬ ಆರೋಪಿ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತಮ್ಮ ಮನೆಯಲ್ಲಿ ತಂದು ಹೂತಿಟ್ಟಿದ್ದ. ಆರೋಪಿಯನ್ನು ಕರೆ ತಂದಿದ್ದ ಮಾಗಡಿ ಪೊಲೀಸರು ಸುಮಾರು 1ಕೆಜಿಗೂ ಜಾಸ್ತಿ ಆಗುವಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.