ಟಾಪ್ ನ್ಯೂಸ್ ಶಿವಮೊಗ್ಗ
– ತೀರ್ಥಹಳ್ಳಿಯ ಬಳಗಟ್ಟೆಯಲ್ಲಿ ಓಮ್ನಿ ಆಕ್ಸಿಡೆಂಟ್!
– ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ ಅಡಿಕೆ ಕೊಯ್ದು ಕಳ್ಳತನ
– ಸಾಗರ: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕ ಸಾವು
– ಶಿವಮೊಗ್ಗ: ಆನ್ಲೈನ್ ಮೂಲಕ ಶಿಕ್ಷಕಿಗೆ ವಂಚನೆ
– ಶಿವಮೊಗ್ಗ: ಮೊಬೈಲ್ ಟವರ್ ಬಿಡಿ ಭಾಗ ಕಳ್ಳತನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ. ಬಳಗಟ್ಟೆ ಎಂಬಲ್ಲಿ ಬುಧವಾರ ಬೆಳಗ್ಗೆ ಓಮ್ನಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇನ್ನು ಯಾರು ಏನೂ ಎಂಬುದು ತಿಳಿದು ಬಂದಿಲ್ಲ. ಕಾರು ಸ್ಥಳದಲ್ಲಿ ಪತ್ತೆಯಾಗಿದೆ.
ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ ಅಡಿಕೆ ಕೊಯ್ದು ಕಳ್ಳತನ
ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ 20 ಚೀಲ ಅಡಿಕೆ ಕೊಯ್ದು ಟ್ರಾಕ್ಟರ್ನಲ್ಲಿ ಕಳ್ಳತನ ಮಾಡಿದ ಘಟನೆ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ. ಕಿರಣ್ ಕುಮಾರ್ ಎಂಬುವವರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮೂವರು, ಸುಮಾರು 20 ಚೀಲದಷ್ಟು ಹಸಿ ಅಡಿಕೆ ಕೊಯ್ದು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುವ ವ್ಯಕ್ತಿ ಕಿರಣ್ ಕುಮಾರ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ ದೂರು ನೀಡಿದ್ದಾರೆ. ಒಟ್ಟು 90 ಸಾವಿರ ರೂ. ಮೌಲ್ಯದ ಅಡಿಕೆ ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸಾಗರ: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕ ಸಾವು
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಮಲಂದೂರಿನಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಪಟ್ಟಣದ ನಿವಾಸಿ ಕೃಷ್ಣಮೂರ್ತಿ (46) ಸಾವಿಗೀಡಾದವರು. ತಕ್ಷಣ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯೆ ಅಸುನೀಗಿದ್ದಾರೆ. ವರ್ಕ್ ಶಾಪ್ ನೌಕರ ಮಲಂದೂರಿನ ಸಂತೋಷ್ ರವರು ಕಟ್ಟಡವೊಂದರಲ್ಲಿ ವಿದ್ಯುತ್ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ.
– ಶಿವಮೊಗ್ಗ: ಬ್ಯಾಂಕ್ ಮ್ಯಾನೇಜರ್ ನೆಪದಲ್ಲಿ ಲಕ್ಷ ಲಕ್ಷ ಮೋಸ!
ಶಿವಮೊಗ್ಗ: ಗೂಗಲ್ನಲ್ಲಿ ಯುನಿಯನ್ ಬ್ಯಾಂಕ್ ಮ್ಯಾನೇಜರ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದ್ದ ಮಹಿಳೆಯ ಬ್ಯಾಂಕ್ ಖಾತೆಯಿಂದ 9.19 ಲಕ್ಷ ರೂ. ಕಣ್ಮರೆಯಾಗಿದೆ. ಶಿವಮೊಗ್ಗ ಶಿಕ್ಷಕಿಯೊಬ್ಬರು ಹಣ ಕಳೆದುಕೊಂಡು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕಿಂಗ್ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಶಿಕ್ಷಕಿಯೊಬ್ಬರು ಗೂಗಲ್ನಲ್ಲಿ ಯುನಿಯನ್ ಬ್ಯಾಂಕ್ ಮ್ಯಾನೇಜರ್ ಮೊಬೈಲ್ ನಂಬರ್ ಸರ್ಚ್ ಮಾಡಿದ್ದರು. ಅಲ್ಲಿ ದೊರೆತ ನಂಬರ್ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮ್ಯಾನೇಜರ್ ಸೋಗಿನಲ್ಲಿ ಮಾತನಾಡಿದ್ದ. ಆತ ಸೂಚಿಸಿದ ಮೊಬೈಲ್ ಆ್ಯಪ್ ಅನ್ನು ಶಿಕ್ಷಕಿ ಇನ್ಸ್ಟಾಲ್ ಮಾಡಿಕೊಂಡಿದ್ದರು. ಚೆಕ್ ಕ್ಲಿಯರೆನ್ಸ್ ಆಗಲು 24 ಗಂಟೆ ಸಮಯ ಬೇಕು ಎಂದು ಆತ ತಿಳಿಸಿದ್ದ. ಮರು ದಿನ ಅದೇ ನಂಬರ್ಗೆ ಶಿಕ್ಷಕಿ ಕರೆ ಮಾಡಿದಾಗ ಇವತ್ತು ನಿಮ್ಮ ಚೆಕ್ ಕ್ಲಿಯರೆನ್ಸ್ ಆಗಲಿದೆ ಎಂದು ಮ್ಯಾನೇಜರ್ ಸೋಗಿನಲ್ಲಿದ್ದಾತ ತಿಳಿಸಿದ್ದ. ಕೆಲವೇ ಹೊತ್ತಿನಲ್ಲಿ ಶಿಕ್ಷಕಿಯ ಬ್ಯಾಂಕ್ ಖಾತೆಯಿಂದ 11 ಬಾರಿ ಹಣ ವರ್ಗಾವಣೆಯಾಗಿತ್ತು. ಒಟ್ಟು 9.19 ಲಕ್ಷ ರೂ. ಹಣ ಬೇರೆಡೆಗೆ ವರ್ಗವಾಗಿತ್ತು. ಮೋಸ ಹೋಗಿರುವುದು ಗೊತ್ತಾದ ಹಿನ್ನೆಲೆ ಶಿಕ್ಷಕಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
– ಶಿವಮೊಗ್ಗ: ಮೊಬೈಲ್ ಟವರ್ ನ ಬಿಡಿ ಭಾಗಗಳು ಕಳ್ಳತನ
ಶಿವಮೊಗ್ಗ : ಖಾಲಿ ಜಾಗದಲ್ಲಿ ಅಳವಡಿಸಿದ್ದ ಮೊಬೈಲ್ ಟವರ್ ಕಳ್ಳತನವಾಗಿದೆ ಎಂಬ ದೂರು ಶಿವಮೊಗ್ಗದಲ್ಲಿ ದಾಖಲಾಗಿದೆ. ಶಿವಮೊಗ್ಗ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು 2008 ರಲ್ಲಿ ಮೊಬೈಲ್ ಟವರ್ ಅಳವಡಿಸಿತ್ತು. ಅದೇ ಸಂಸ್ಥೆ ಟವರ್ನ ನಿರ್ವಹಣೆ ಮಾಡುತ್ತಿತ್ತು. ಕೋವಿಡ್ ಸಂದರ್ಭ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಆ ಬಳಿಕ ಸಂಸ್ಥೆಯವರು ಸ್ಥಳಕ್ಕೆ ಬಂದಾಗ ಮೊಬೈಲ್ ಟವರ್ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳು ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟವರ್ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ಉಲ್ಲೇಖಿಸಲಾಗಿದೆ.