ಜಾನುವಾರು ಕಳ್ಳರು ಅರೆಸ್ಟ್!
– ಹೊಸದುರ್ಗ ಪೊಲೀಸರು ಬಂಧನ: ಹಗಲಿನಲ್ಲಿ ಹಳ್ಳಿಗಳಲ್ಲಿ ಸುತ್ತಾಡಿ ರಾತ್ರಿ ಸಮಯದಲ್ಲಿ ಕಳ್ಳತನ
– 5 ವಾಹನ, ₹ 1,55 ಲಕ್ಷ ಹಣ ವಶ: ಕಾರಿನಲ್ಲೇ ದನ ಕಳ್ಳತನ!
NAMMUR EXPRESS NEWS
ಚಿತ್ರದುರ್ಗ: ಅಂತರ ಜಿಲ್ಲಾ ಜಾನುವಾರು ಕಳ್ಳರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹ 1,55,000 ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 5 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸದುರ್ಗದ ಕಲ್ಲೇಶ್ವರ ಬಡಾವಣೆ ನಿವಾಸಿ ತೌಫೀಕ್ (30),ಭದ್ರಾವತಿಯ ನವಾಜ್ ಪಾಷ (26) ಹಾಗೂ ಭದ್ರಾವತಿಯ ತಿಪ್ಪಲಾಪುರ ಕ್ಯಾಂಪ್ನ ದಾದಪೀರ್ (30) ಬಂಧಿತರು. ಜೂನ್ 17 ರಂದು ಹೊಸದುರ್ಗ ತಾಲ್ಲೂಕು ಜಾನಕಲ್ ಗ್ರಾಮದ ದಾದವಲಿ ಅವರ ಮನೆ ಮುಂಭಾಗದಲ್ಲಿ ಕಟ್ಟಿಹಾಕಿದ್ದ ಹಸು ಕಳ್ಳತನವಾಗಿದೆ ಎಂದು ಹೊಸದುರ್ಗ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಾರಿನಲ್ಲೇ ದನ ಕಳ್ಳತನ!
ದನದ ವ್ಯಾಪಾರ ಮಾಡುತ್ತಿದ್ದ ಆರೋಪಿಗಳು ತಮ್ಮ ಮಾರುತಿ ರಿಡ್ಜ್ ಕಾರಿನಲ್ಲಿ ಹಗಲಿನಲ್ಲಿ ಹಳ್ಳಿಗಳಲ್ಲಿ ಸುತ್ತಾಡಿ ರಾತ್ರಿ ಸಮಯದಲ್ಲಿ ಕಳ್ಳತನದ ಮಾಡುತ್ತಿದ್ದರು. ಪೊಲೀಸರಿಗೆ ಅನುಮಾನ ಬಾರದಂತೆ ಕಳ್ಳತನಕ್ಕೆ ಮಹೀಂದ್ರಾ ಸ್ಕಾರ್ಪಿಯೋ, ಅಶೋಕ ಲೈಲಾಂಡ್, ಟಾಟಾ ಅರಿಯಾ ಮತ್ತು ಮಹೀಂದ್ರ ಝಲೋ ವಾಹನಗಳನ್ನು ಬಳಸಿಕೊಳ್ಳುತ್ತಿದ್ದರು. ಕಳ್ಳತನ ಮಾಡಿದ ದನಗಳನ್ನು ಗ್ರಾಮಗಳ ವಾರದ ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣವನ್ನು 3 ಜನರು ಹಂಚಿಕೊಳ್ಳುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಒಟ್ಟು 13 ಹಸುಗಳನ್ನು ಕಳ್ಳತನ ಮಾಡಿ ಹೊಳೆಹೊನ್ನೂರು, ಭದ್ರಾವತಿ ಸಂತೆಗಳಲ್ಲಿ 3,15,000 ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಆರೋಪಿತರಿಂದ ₹ 1,55,000 ನಗದು ವಶ ಪಡಿಸಿಕೊಂಡಿದ್ದಾರೆ. ಉಳಿದ ಹಣವನ್ನು ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಸ್ಕಾರ್ಪಿಯೋ, ಅಶೋಕ ಲೈಲಾಂಡ್, ಟಾಟಾ ಅರಿಯಾ, ಮಹೀಂದ್ರ ಝಲೋ ಹಾಗೂ ಮಾರುತಿ ರಿಟ್ಸ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಪಿಐ ಎನ್.ತಿಮ್ಮಣ್ಣ, ಪಿಎಸ್ಐ ಗಳಾದ ಮಹೇಶ್ ಕುಮಾರ್, ಭೀಮನಗೌಡ ಪಾಟೀಲ್ ಹಾಗೂ ಸಿಬ್ಬಂದಿ ಜಯರಾಜ, ಕುಮಾರ್, ರಾಜಣ್ಣ, ತಿಪ್ಪೇಸ್ವಾಮಿ, ಗಂಗಾಧರ ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.