ವರವ ಕೊಡೆ ವರ ಮಹಾಲಕ್ಷ್ಮಿ!
– ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಏಕೆ.. ಹೇಗೆ..?
– ಹಣ, ಚಿನ್ನ, ಸಂಪತ್ತು ಕೊಡುವ ಲಕ್ಷ್ಮಿ ಆರಾಧನೆ ಏಕೆ ಮಾಡಬೇಕು..?
NAMMUR EXPRESS NEWS
ಹಿಂದೂ ಸಂಪ್ರದಾಯದಲ್ಲಿ ವೃತಗಳಿಗೆ ವಿಶಿಷ್ಟ ಸ್ಥಾನಮಾನವಿದೆ. ಅದರಲ್ಲೂ ಶ್ರಾವಣ ಮಾಸದ ಹುಣ್ಣಿಮೆಯ ಮೊದಲ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ವ್ರತವನ್ನು ಸಂಪ್ರದಾಯಬದ್ಧವಾಗಿ ವಿಜೃಂಭಣೆಯಿಂದ ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ವೃತಮಾಡಿ ಸಕಲ ಐಶ್ವರ್ಯ ವೃದ್ಧಿ ಮಾಡುವ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಏನಿದು ವರಮಹಾಲಕ್ಷ್ಮಿ ವ್ರತ?
ಕೇಳಿದೆಲ್ಲ ದಯಪಾಲಿಸುವ ದೇವಿಯೇ ವರಮಹಾಲಕ್ಷ್ಮಿ. ಆಕೆಯನ್ನು ಪೂಜಿಸುವ ಹಬ್ಬವೇ ವರಮಹಾಲಕ್ಷ್ಮೀ ಹಬ್ಬ. ಹಾಗಾದ್ರೆ ಇದರ ಇತಿಹಾಸ ಏನು..? ಒಮ್ಮೆ ದುರ್ವಾಸ ಮಹರ್ಷಿಗಳ ಶಾಪದಿಂದ ಇಂದ್ರನ ಜೊತೆ ವೈಕುಂಠ ಅಧಿಪತಿಯ ಮಡದಿಯಾದ ಲಕ್ಷ್ಮಿ ದೇವಿಯು ಸಹ ರಾಜ್ಯ ಭ್ರಷ್ಟಳಾಗುತ್ತಾಳೆ. ಆದ ಕಾರಣ ಲಕ್ಷ್ಮಿ ದೇವಿ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮದುಃಖಾಕ್ರಾಂತರಾದ ದೇವತೆಗಳೆಲ್ಲರೂ ಬ್ರಹ್ಮದೇವ ಮತ್ತು ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನ ಸಂಪತ್ತ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಮತ್ತೆ ಕ್ಷೀರಸಮುದ್ರದ ಮಂಥನದ ಫಲವಾಗಿ ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುನೊಂದಿಗೆ ವಿವಾಹವಾದಳು. ಈ ದಿನವನ್ನು ಸಕಲವನ್ನು ನೀಡುವ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಈ ವ್ರತ ಆಚರಣೆಯ ಇತಿಹಾಸದ ಬಗ್ಗೆ ನಾನಾ ರೀತಿಯ ಕಥೆಗಳು ಪ್ರಚಲಿತದಲ್ಲಿದೆ.
ವರಮಹಾಲಕ್ಷ್ಮಿ ವ್ರತದ ಆಚರಣೆ ಹೇಗೆ?
ವರಮಹಾಲಕ್ಷ್ಮಿಯು ಅಷ್ಟ ಲಕ್ಷ್ಮಿಯ ಸಂಯೋಜಿತ ಶಕ್ತಿಯನ್ನು ಹೊಂದಿದ್ದಾಳೆನ್ನುವ ನಂಬಿಕೆಯಿದೆ. ವರಮಹಾಲಕ್ಷ್ಮಿ ವ್ರತದ ಆಚರಣೆಯನ್ನ ಹೆಚ್ಚಾಗಿ ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಹಾಗಾಗಿ ಪೀಳಿಗೆಯಿಂದ ಪೀಳಿಗೆಗೆ ಆಚರಣೆ ಮುಂದುವರಿದಿದೆ. ವ್ರತವನ್ನುಆಚರಿಸುವವರು ಇಡೀ ದಿನ ಉಪವಾಸವಿದ್ದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪೂಜಾ ಸ್ಥಳವನ್ನ ಶುದ್ದಿಕರಿಸಿ ಮರದ ಮಣೆ ಮೇಲೆ ನೀರಿನಲ್ಲಿ ಬೆರೆಸಿದ ಅರಿಶಿನವನ್ನು ಹಚ್ಚಿ ಮತ್ತು ನಂತರ ಅಕ್ಕಿ ಪುಡಿಯಿಂದ ರಂಗೋಲಿಯನ್ನು ಹಾಕುತ್ತಾರೆ. ಅನಂತರ ಮರದ ಮಣೆಯ ಮಧ್ಯದಲ್ಲಿ ಸ್ವಲ್ಪ ಅಕ್ಷತೆ ಹಾಕಿ ಅದರ ಮೇಲೆ ಲೋಹದ ತಟ್ಟೆಯನ್ನು ಇಡುತ್ತಾರೆ. ಅ ತಟ್ಟೆಯಲ್ಲಿ ಅಕ್ಕಿಯನ್ನು ಸಮವಾಗಿ ಹರಡಿ.ಅರಿಶಿನ ಮತ್ತು ಕುಂಕುಮವನ್ನು ಕಲಶದ ಮೇಲೆ ಹಚ್ಚಿ ಮತ್ತು ತಟ್ಟೆಯ ಮಧ್ಯದಲ್ಲಿ ಇಡಲಾಗುತ್ತದೆ.ಕಲಶಕ್ಕೆ ನೀರು ಹಾಕಿ ಸ್ವಲ್ಪ ಅಕ್ಷತೆ ಹಾಕಿ, ಕಲಶದ ಮೇಲೆ ತೆಂಗಿನಕಾಯಿ ಇರಿಸಿ.
ತೆಂಗಿನಕಾಯಿಯ ಮೇಲೆ ಲಕ್ಷ್ಮಿ ದೇವಿಯ ಮುಖವನ್ನು ಹಾಕಿ ಅ ಕಳಸಕ್ಕೆ ಸೀರೆಯನ್ನು ಉಡಿಸಿ, ಆಭರಣವನ್ನು ತೊಡಿಸಿ ಕಳಸವನ್ನೆ ಸಾಕ್ಷಾತ್ ದೇವಿಯ ವಿಗ್ರಹದಂತೆ ರೆಡಿ ಮಾಡಿ ಕನ್ನಡಿಯನ್ನು ಇಟ್ಟು ಎಣ್ಣೆಯ ದೀಪವನ್ನು ಬೆಳಗಿಸಿ ದೇವಿಯ ಮುಂದೆ ಹಳದಿ ಬಣ್ಣದ ದಾರವನ್ನು ಇಡಲಾಗುತ್ತದೆ. ನಂತರ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿ , ವರಲಕ್ಷ್ಮಿ ದೇವಿಗೆ ಸಮರ್ಪಿತವಾದ ಪವಿತ್ರ ಮಂತ್ರಗಳನ್ನು ಪಠಿಸಲಾಗುತ್ತದೆ. ನೈವೇದ್ಯ ಮಾಡಲಾಗುತ್ತದೆ.
ಪೂಜೆ ಮಾಡಿದ್ರೆ ಇಷ್ಟಾರ್ಥ ನೆರವೇರುತ್ತೆ!
ವರಮಹಾಲಕ್ಷ್ಮಿ ಹೆಸರಿಗೆ ತಕ್ಕಂತೆ ಕೇಳಿದೆಲ್ಲ ಕಲ್ಪಿಸುವ ದೇವಿ. ಹಿಂದೂ ಸಂಪ್ರದಾಯದ ಪ್ರಕಾರ, ವರಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಭೂಮಿ, ಐಶ್ವರ್ಯ, ಸಂಪತ್ತು, ಬುದ್ಧಿವಂತಿಕೆ, ಪ್ರೀತಿ, ಖ್ಯಾತಿ, ಶಾಂತಿ, ಸಿಗುತ್ತದೆ ಆದ್ದರಿಂದ ವಿವಾಹಿತ ಮಹಿಳೆ ಕುಟುಂಬದ ಹಿತದೃಷ್ಟಿಯಿಂದ ವ್ರತವನ್ನು ಆಚರಿಸಿದ್ದಾರೆ. ಈ ದಿನ ವರಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾಗಿರುವುದ್ದರಿಂದ ಸಕಲ ಇಷ್ಟಾರ್ಥವು ಈಡೇರುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಅತ್ಯಂತ ಮಂಗಳಕರ ದಿನ. ಆದ್ದರಿಂದ ಶ್ರಾವಣ ಶುಕ್ರವಾರದಂದು ಲಕ್ಷ್ಮೀದೇವಿಯನ್ನು ಪೂಜಿಸುವುದು ಅತ್ಯಂತ ಪುಣ್ಯಕರವಾಗಿದೆ.
ಎಲ್ಲರೂ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ. ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶಭಾಶಯಗಳು.