ಶಿವಮೊಗ್ಗ ಕೃಷಿ ಮೇಳ ನೋಡ ಬನ್ನಿ!
– ಕೃಷಿ, ಕೃಷಿ ಸಲಕರಣೆಗಳ ಅನಾವರಣ: 300ಕ್ಕೂ ಹೆಚ್ಚು ಸ್ಟಾಲ್
– ಕೃಷಿ ಮೇಳಕ್ಕೆ ಆಗಮಿಸಿದ್ದ ರೈತರಿಗೆ ಉಚಿತ ಆರೋಗ್ಯ ತಪಾಸಣೆ
– ಮಳೆಯಿಂದ ಕೃಷಿ ಮೇಳಕ್ಕೆ ಅಡ್ಡಿ: ಭಾನುವಾರ ಲಕ್ಷ ಜನ?
NAMMUR EXPRESS NEWS
ಶಿವಮೊಗ್ಗ : ನವುಲೆಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅ.18ರಿಂದ 21ರವರೆಗೆ ನಡೆಯುವ ಕೃಷಿ ಮೇಳಕ್ಕೆ ಶಿವಮೊಗ್ಗ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ರೈತರು, ಕೃಷಿ ಆಸಕ್ತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಕೃಷಿ ಕಾಲೇಜು ಆವರಣದಲ್ಲಿ ಸ್ಟಾಲ್ಗಳನ್ನು ನಿರ್ಮಿಸಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಕೃಷಿ ಮೇಳದಲ್ಲಿ 300ಕ್ಕೂ ಹೆಚ್ಚು ಸ್ಟಾಲ್ಗಳನ್ನು ಸ್ಥಾಪಿಸಲಾಗಿದೆ. ವಿವಿಧ ಕೃಷಿ ವಿಶ್ವವಿದ್ಯಾಲಯದ ವಿಭಾಗಗಳು, ಕೃಷಿ, ತೋಟಗಾರಿಕೆ ಇಲಾಖೆಗಳ ವಿವಿಧ ವಿಭಾಗಗಳು ಸ್ಟಾಲ್ ನಿರ್ಮಿಸಿದ್ದವು. ಕೀಟಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ ಕೀಟ ಪ್ರಪಂಚ ಎಲ್ಲರನ್ನು ಆಕರ್ಷಿಸಿದವು.
ಸಾವಯವ ಕೃಷಿ ಸಂಶೋಧನ ಕೇಂದ್ರಗಳು, ಬಹುಸ್ಥರೀಯ ಬೆಳೆ ಪದ್ಧತಿ, ಅಡಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ, ಜೈವಿಕ ಇಂಧನ ಉದ್ಯಾನಗಳು ರೈತರ ಗಮನ ಸೆಳೆದವು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸಂಬಂಧ ವಿವಿಧ ಸಂಸ್ಥೆಗಳ ಸ್ಟಾಲ್ಗಳು ಇಲ್ಲಿವೆ. ಬಗೆಬಗೆಯ ಆಹಾರ ಉತ್ಪನ್ನ , ಸಮಗ್ರ ಜಲಾನಯನ ಅಭಿವೃದ್ಧಿ, ಜೇನು ಕೃಷಿ, ನಮ್ಮ ತೋಟ, ಅಣಬೆ ಕೃಷಿ, ಮೀನುಗಾರಿಕೆ ಮಳಿಗೆಗಳು, ಸಿರಿಧಾನ್ಯಗಳ ಮಳಿಗೆ, ವಿವಿಧ ರೀತಿಯ ಬಾಳೆ, ಅಡಿಕೆ , ಕೃಷಿ ಮತ್ತು ತೊಟಗಾರಿಕೆ ತಳಿ, ವಿವಿಧ ಯಂತ್ರೋಪಕರಣ, ಸಾವಯವ ಗೊಬ್ಬರ, ವಿವಿಧ ನರ್ಸರಿಗಳು ಪಾಲ್ಗೊಂಡಿದ್ದವು. ಹಲವು ಬಗೆಯ ಸಸ್ಯ ತಳಿ ಪ್ರದರ್ಶನ ಮಾಡಲಾಗಿತ್ತು.
– ರೈತರಿಗೆ ಉಚಿತ ಆರೋಗ್ಯ ತಪಾಸಣೆ
ಕೃಷಿ ಮೇಳಕ್ಕೆ ಆಗಮಿಸಿದ್ದ ರೈತರಿಗೆ ಈ ಬಾರಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ ನಡೆಯಿತು. ದೊಡ್ಡ ಸಂಖ್ಯೆ ರೈತರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವೈದ್ಯರು ರೈತರಿಗೆ ಮಾಹಿತಿ ನೀಡಿದರು.
ಕಾಲಿಟ್ಟಲ್ಲಿ ಕೆಸರು ಕೆಸರು ಕೃಷಿ ಮೇಳದ ಸಂದರ್ಭದಲ್ಲೇ ಮಳೆಯಾಗಿದ್ದರಿಂದ ಮೇಳದಲ್ಲಿ ಸ್ವಲ್ಪ ಅಸ್ಥವ್ಯಸ್ಥವಾಯಿತು. ಜರ್ಮನ್ ಟೆಂಟ್ ಪೆಂಡಾಲ್ ಹಾಕಲಾಗಿದ್ದರೂ ನೀರು ಹರಿದು ಕ್ರೀಡಾಂಗಣ ಕೆಸರುಮಯವಾಗಿತ್ತು. ಜನರಿಗೆ ತೊಂದರೆ ಅಗದಂತೆ ತಡೆಯಲು ಮ್ಯಾಟ್ ಹಾಕಲಾಗಿತ್ತು. ಆದರೂ ಕೆಸರಾಗಿದ್ದರಿಂದ ಜನರ ಕಾಲಿಟ್ಟೆಲ್ಲಿ ಮಣ್ಣು ಜರುಗಿದಂತಾಗುತ್ತಿತ್ತು. ರೈತರು ಮಾತ್ರವಲ್ಲದೆ ಶಿವಮೊಗ್ಗ ನಗರದ ವಿವಿಧೆಡೆಯಿಂದ ಜನರು ಕೃಷಿ ಮೇಳದಲ್ಲಿ ಭಾಗವಹಿಸಿದ್ದರು. ಮಕ್ಕಳು, ಮಹಿಳೆಯರು ಕೂಡ ಮೇಳಕ್ಕೆ ಆಗಮಿಸಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕುರಿತು ಮಾಹಿತಿ ಪಡೆದರು. ತಿಂಡಿ, ತಿನಿಸುಗಳ ಮಾರಾಟ ಮಳಿಗೆಗಳಿಗೆ ಜನ ಮುಗಿಬಿದ್ದಿದ್ದರು. ಅ.21 ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳ ನಡೆಯಲಿದೆ.