ಬೆಳಗ್ಗೆ 9 ಗಂಟೆವರೆಗೆ ಮುಂದುವರಿದ ಮಂಜು!
– ಸೈಕ್ಲೋನ್ ಎಫೆಕ್ಟ್ : ಚಳಿಗೆ ಜನ ಜೀವನ ತತ್ತರ
– ಸುಗಮ ಸಂಚಾರಕ್ಕೂ ಅಡಚಣೆ: ಬೆಂಕಿ ಮೊರೆ!
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಚಳಿಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಚಳಿ ಅನುಭವ ಜನರಿಗೆ ಅಷ್ಟಾಗಿ ಆಗಿರಲಿಲ್ಲ. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಂಜು ಆವರಿಸಿಕೊಳ್ಳುತ್ತಿದ್ದು, ನೀರಿನ ಹನಿ ಸುರಿಸುತ್ತಿದೆ. ಕಳೆದ ಎರಡು ದಿನಗಳಿಂದ ಮಂಜಿನಿಂದಾಗಿ ಬೆಳಗ್ಗೆ 9 ಗಂಟೆಯಾದರೂ ರಸ್ತೆಗಳು ಕಾಣದಂತಾಗಿದ್ದು, ಸೈಕ್ಲೋನ್ ಎಫೆಕ್ಟ್ ನಿಂದಾಗಿ ಎಲ್ಲೆಡೆ ತಂಡಿ ಹೆಚ್ಚಾಗಿ ಮಂಜು ಮುಸುಕಿದೆ. ಸೂರ್ಯ ಮುಳಗುತ್ತಿದ್ದಂತೆ ಆರಂಭವಾಗುವ ತಣ್ಣನೆಯ ಚಳಿ ರಾತ್ರಿ ಪೂರಾ ವಾತಾವರಣದೊಂದಿಗೆ ಬೆರತು ಬೆಳಗ್ಗೆ 9 ಗಂಟೆಯಾದರೂ ಮಂಜು ಆವರಿಸಿಕೊಂಡು ಜನರನ್ನು ಮನೆಯಿಂದ ಹೊರಬಾರದಂತೆ ಮಾಡಿದೆ.
ವಾಹನ ಸಂಚಾರಕ್ಕೆ ಅಡಚಣೆ
ಮಂಜಿನ ಎಫೆಕ್ಟ್ನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಒಂಬತ್ತು ಗಂಟೆ ಯಾದರೂ ವಾಹನಗಳ ಹೆಡ್ಲೈಟ್ ಆರಿಸದೆ ಸಂಚರಿಸುವ ವಾಹನಗಳು, ಮನೆಯಿಂದ ಜನ ಆಚೆ ಬರಲು ಹಿಂದೆಮುಂದೆ ನೋಡುವಂತಾಗಿದೆ. ನಿತ್ಯ ಕೆಲಸಕ್ಕೆ ಹೋಗುವ ರೈತರು ಹೇಗಾಪ್ಪ ತೋಟದತ್ತ ಹೋಗುವುದು ಎಂದು ಯೋಚಿಸುತ್ತಾ ಕಂಬಳಿ ಹೊದ್ದು ಮನೆಯಲ್ಲಿ ಕೂರುತ್ತಿದ್ದಾರೆ. ಆಗುಂಬೆ ಸೇರಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾತಾವರಣ ಕೂಲ್ ಕೂಲ್ ಆಗಿದೆ.
ಬೆಂಕಿ ಶಾಖಕ್ಕೆ ಮೊರೆ!
ಚುಮು ಚುಮು ಚಳಿಯಿಂದ ತಪ್ಪಿಸಿಕೊಳ್ಳಲು ಜನತೆ ಮನೆಯ ಒಲೆಯ ಮುಂದೆ ಬೆಂಕಿ ಕಾಯಿಸಲು ಮುಂದಾಗುತ್ತಿದ್ದು, ಕೆಲಸಗಳಿಗೆ ಬೆಳಗ್ಗೆ ಹೊರಡುವ ಜನತೆ ಬಸ್ ನಿಲ್ದಾಣಗಳಲ್ಲಿ ಚಳಿಗೆ ನಡುಗುತ್ತ ನಿಂತಿರುವಂತ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿದೆ.
ರಾಜಧಾನಿಯಲ್ಲೂ ಚಳಿ ಚಳಿ
ಸೈಕ್ಲೋನ್ ಎಫೆಕ್ಟ್ ಹಿನ್ನೆಲೆ ರಾಜಧಾನಿಯಲ್ಲಿ ಭಾರೀ ಚಳಿ, ತಂಡಿ ಗಾಳಿ ಹೆಚ್ಚಾಗಿದೆ. ಅನೇಕರ ಅರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ.