ಮಲೆನಾಡಿನಲ್ಲಿ ಮುಂಗಾರು ಮಳೆ ವೈಭವ.!
– ಮಳೆ ಇಲ್ಲದೆ ಬತ್ತಿದ್ದ ನದಿಗಳಿಗೆ ಜೀವಕಳೆ
– ಮಲೆನಾಡು ಕೃಷಿಗೆ ಮಳೆ ಆಸರೆ
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮುಂಗಾರು ಮಳೆ ಆರಂಭಗೊಂಡಿದ್ದು, ಮಲೆನಾಡಿನಲ್ಲಿ ಮುಂಗಾರು ಮಳೆಯ ವೈಭವ ಮರುಕಳಿಸಿದೆ.
ಬೀಸುವ ಥಂಡಿ ಗಾಳಿ, ನಿರಂತರವಾಗಿ ಸುರಿಯುವ ತುಂತುರು ಮಳೆ, ಕೈಯಲ್ಲಿ ಕೊಡೆ ಇಲ್ಲದೇ ಹೊರಗೆ ಹೋಗಲಾರದಂತಹ ಚಿತ್ರಣ ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ.
ಮಳೆ ಬಾರದೆ ಬರಿದಾಗಿದ್ದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಮುಂಗಾರು ಮಳೆಯಿಂದಾಗಿ ಹರಿಯಲು ಆರಂಭಿಸಿದೆ. ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ಮುಂಗಾರು ಮಳೆಗೆ ನಿಸರ್ಗದ ನಡುವಿನ ಇಲ್ಲಿನ ಜಲಪಾತಗಳು ನಿಧಾನವಾಗಿ ಭೋರ್ಗರೆಯತೊಡಗುತ್ತವೆ. ಹಳ್ಳ ಕೊಳ್ಳಗಳು ಮನಸ್ಸಿಗೆ ಮುದ ನೀಡುತ್ತವೆ. ಅವು ಒಂದು ರೀತಿಯಲ್ಲಿ ಹಿತಾನುಭವದ ಕೊಂಡಿಯೂ ಹೌದು. ಇಡೀ ಪರಿಸರ ತಂಪಾಗಿ ಮೈಯೆಲ್ಲಾ ಬೆಚ್ಚಗೆ ಹಂಬಲಿಸುವ ಸಂದರ್ಭವದು. ಮನೆಯಿಂದ ಹೊರಬೀಳುವುದೆಂದರೆ ಕೈ ಕೈ ಹಿಸುಕಿಕೊಳ್ಳುವ ಸಮಯವದು. ಕಂಬಳಿ ಹೊದ್ದು ಮಲಗಿ ಬಿಡಬೇಕೇ ಎಂಬಂತಹ ವಾತಾವರಣ ಸೃಷ್ಟಿಯಾಗಿ ಬಿಟ್ಟಿರುತ್ತದೆ.
ಬಿಸಲಿನ ಝಳಕ್ಕೆ ಬೆಂಡಾಗಿದ್ದ ದಟ್ಟ ಕಾಡು ಮಲೆನಾಡಿನ ಮರ, ಗಿಡ, ಹೂ, ಬಳ್ಳಿಗಳು ಹೀಗೆ ಸಹ್ಯಾದ್ರಿ, ಪಶ್ಚಿಮ ಘಟ್ಟಗಳ ಸಾಲುಗಳು ಮಳೆಯ ಹನಿಗಳು ಇಳೆಗೆ ಇಳಿಯಲಾರಂಭಿಸಿದ ಕೂಡಲೇ ತಮ್ಮ ನೈಜ ರೂಪ, ಸೌಂದರ್ಯವನ್ನು ತೋರ್ಪಡಿಸಿ ಹಸಿರಾದ ಪರಿಸರ ಸಾಲುಗಳು ನೋಡುಗರನ್ನು ಆಕರ್ಷಿಸುತ್ತವಲ್ಲದೇ ಚಕಿತಗೊಳಿಸುವಂತಿರುತ್ತದೆ.
ಮಲೆನಾಡು ಕಷಿಕರ ಸೆರಗು.!
ಮಲೆನಾಡು ಅಂದರೆ ಸಾಕು ಥಟ್ಟನೆ ನೆನಪಿಗೆ ಬರುವುದು ಮುಖ್ಯವಾಗಿ ಅಡಕೆ, ಭತ್ತ ಬೆಳೆ. ಇದೊಂದು ಕಷಿಕರ ಸೆರಗು. ಇಲ್ಲಿ ಆರಂಭದ ಮಳೆಗೆ ಕಷಿಕರು ಮೈ ಕೊಡವಿ ಮೇಲೆದ್ದು ಬಿಡುತ್ತಾರೆ. ಕಷಿ ಚಟುವಟಿಕೆಗೆ ಅಣಿಯಾಗಲು ಸಿದ್ಧರಾಗುತ್ತಾರೆ. ಮಲೆನಾಡು, ಹೆಚ್ಚಾಗಿ ಅರೆಮಲೆನಾಡು ಭಾಗದಲ್ಲಿ ಭತ್ತ ಬಿತ್ತನೆಯ ಕಾರ್ಯ ಗರಿಗೆದರುತ್ತದೆ. ಇನ್ನು ಮಹಿಳೆಯರಿಗಂತೂ ಮನೆಯ ಮುಂದಿನ ತೋಟದಲ್ಲಿ ತರಕಾರಿ ಬೀಜಗಳ ಬಿತ್ತುವ, ಹೂ ಗಿಡಗಳನ್ನು ನೆಡುವ ಕಾಯಕ. ಒಟ್ಟಾರೆ ಮುಂಗಾರು ಮಳೆಯ ಮಲೆನಾಡಿನ ಕಷಿ ಚಟುವಟಿಕೆ ಉಲ್ಲಾಸದ ವಾತಾವರಣ ಬಿಂಬಿಸುತ್ತದೆ.