ಸಂಕಷ್ಟ ತಂದಿಟ್ಟ ಹವಾಮಾನ ವೈಪರೀತ್ಯ..!
– ಮಲೆನಾಡು, ಕರಾವಳಿ ರೈತರು ಕಂಗಾಲು
– ಭತ್ತ, ಅಡಿಕೆಗೆ ಮುಳುವಾದ ಮಳೆ!
NAMMUR EXPRESS NEWS
ಮಲೆನಾಡು: ರಾಜ್ಯಾದ್ಯಂತ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಗುರುವಾರ ಬೆಳಗ್ಗೆಯಿಂದ ಮಲೆನಾಡು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ಸುರಿದ ತುಂತುರು ಮಳೆಯಿಂದಾಗಿ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಸಂಕ್ರಾಂತಿ ಕಾಲಿಡುತ್ತಿದ್ದು, ಎಲ್ಲೆಡೆ ಬೆಳೆಗಳ ಕೊಯ್ಲು, ಸುಗ್ಗಿ ಆರಂಭವಾಗಿದೆ. ಕಳೆದೆರಡು ವಾರಗಳಿಂದ ಉತ್ತಮ ಬಿಸಿಲಿನ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಡಿಕೆ, ಹಾಸನ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಕಾಫಿ ಮತ್ತು ಈ ಎಲ್ಲ ಜಿಲ್ಲೆಗಳಲ್ಲಿ ಭತ್ತದ ಕೊಯ್ಲನ್ನು ರೈತರು ಆರಂಭಿಸಿದ್ದರು. ಭತ್ತವನ್ನು ಕೊಯ್ಲು ಮಾಡಿದ ಎರಡು ದಿನಗಳಲ್ಲಿ ಸ್ಥಳಾಂತರಿಸಿ ಒಕ್ಕಿ, ರಾಶಿ ಮಾಡಲೇಬೇಕು. ಕೆಲವೆಡೆ ಕುಯ್ದ ಬತ್ತವನ್ನು ಗದ್ದೆಗಳಲ್ಲೇ ಬಿಡಲಾಗಿದೆ, ಇನ್ನು ಕೆಲವೆಡೆ ಒಕ್ಕಲು ನಡೆಯುತ್ತಿದ್ದು ಫಸಲು ಗದ್ದೆಯಲ್ಲಿ ನೆನೆಯುವಂತಾಗಿದೆ. ಹೀಗಾಗಿ ಭತ್ತದ ತೆನೆ ಅಲ್ಲೇ ಮೊಳಕೆ ಒಡೆಯುವ ಅಪಾಯವಿದೆ.
ಇದಲ್ಲದೆ ಇತ್ತೀಚಿನ ವರ್ಷಗಳಲ್ಲಿ ಭತ್ತ, ರಾಗಿ ಒಕ್ಕಲಿಗೆ ರೈತರು ಪ್ರತ್ಯೇಕ ನಿರ್ಮಿಸುವ ಸಾಂಪ್ರದಾಯಕ್ಕೆ ಮಂಗಳ ಹಾಡಿದ್ದಾರೆ. ಎತ್ತುಗಳಿಂದ ಒಕ್ಕಣೆಕಲ್ಲು ಬಳಕೆಯು ಅಪರೂಪ. ಬದಲಿಗೆ ಯಂತ್ರ ಬಳಸಿ ಕೊಯ್ಲು ಮಾಡಿ ಸಿಮೆಂಟ್ / ಡಾಂಬರು ರಸ್ತೆಗಳಲ್ಲಿ ಹರವಿ ಟ್ರ್ಯಾಕ್ಟರ್ ಮೂಲಕ ಒಕ್ಕಲಾಗುತ್ತಿದೆ. ಇದೀಗ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ಬಿದ್ದ ನೀರು ಹೀರಿ ಹೋಗದೆ ಭತ್ತದ ಹೊರೆಗಳಲ್ಲಿ ಸಿಲುಕಿ ಬೆಳಗ್ಗೆ ಬೂಸಲು ಬರುತ್ತಿದೆ. ಮಳೆ ನಿಂತ ಮೇಲೆ ರಾಶಿ ಎತ್ತಲು ಹೋದರೆ, ಭತ್ತ ಉದುರುವುದು ಒಂದು ಸಮಸ್ಯೆಯಾದರೆ, ನೆಲ್ಲಿನ ತೊಟ್ಟು ಭಾಗದಲ್ಲಿ ನೀರು ಸಿಲುಕಿ ಅಕ್ಕಿಯ ಗುಣಮಟ್ಟ ನಾಶವಾಗುವ ಭೀತಿ ಎದುರಾಗಿದೆ. ಮಿಲ್ ಗಳಲ್ಲಿ ನುಚ್ಚು ಹೆಚ್ಚುವ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ.
ಕಾಫಿಗೆ ಕಾಡುವ ಫಂಗಸ್ ಭೀತಿ : ಇನ್ನು ಕಾಫಿ ಬೆಳೆಗಾರರದ್ದು ಮತ್ತೊಂದು ಸಮಸ್ಯೆ. ಕಳೆದ ಡಿಸೆಂಬರ್ ನಲ್ಲಿ ಬೆಳೆಗಾರರು ಹಣ್ಣು ಕೊಯ್ಲು ಪ್ರಾರಂಭಿಸಿದ್ದರು. ಕುಯ್ದ ದಿನವೇ ಸಿಪ್ಪೆ ಸುಲಿಯಲು ಪಲ್ಚರ್ ಮಾಡುತ್ತಾರೆ. ಇದಾದ ಬಳಿಕ ಕನಿಷ್ಠ ನಾಲ್ಕೈದು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಆದರೆ ಬಿಸಿಲು ಇಲ್ಲದೆ ವಾರದಿಂದ ಮೋಡಕವಿದ ವಾತಾವರಣ ಹಾಗೂ ಎರಡು ದಿನಗಳಿಂದ ಮಳೆ ಆಗುತ್ತಿರುವುದರಿಂದ ಕಾಫಿ ಬೀಜದಲ್ಲಿ ಫಂಗಸ್ ಉಂಟಾಗಿ ಕಂದು ಬಣ್ಣಕ್ಕೆ ತಿರುಗಿದೆ. ಕಣ್ಣದಲ್ಲಿ ಒಣಗಿಸಲು ಹಾಕಿದ ಕಾಫಿ ನೀರಿನಿಂದ ಕೊಳೆಯುವಂತಾಗಿದೆ.
ಇದರಿಂದ ಗುಣಮಟ್ಟ ಕ್ಷೀಣಿಸುತ್ತದೆ. ಇದನ್ನು ತಪ್ಪಿಸಲು ಸಿರಿವಂತ ಬೆಳೆಗಾರರು ಡ್ರೈಯರ್ ಬಳಸುತ್ತರಾದರೂ ಸಣ್ಣ, ಮಧ್ಯಮ ಬೆಳೆಗಾರರಿಗೆ ಇದು ಕಷ್ಟ ಸಾಧ್ಯ ಎನ್ನುವುದು ಅಳಲು. ಇನ್ನು ಮೂಡಿಗೆರೆ ತಾಲೂಕಿನಾದ್ಯಂತ ಅರೇಬಿಕ ಕಾಫಿ ಕುಯ್ಲು ಆರಂಭವಾಗಿದೆ. ರೋಬಸ್ಟಾ ಕಾಫಿಯು ಹಣ್ಣಾಗಿದ್ದು, ರೈತರು ಕೂಯ್ಲಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಮಳೆ ಸುರಿಯುತ್ತಿರುವುದರಿಂದ ಬೆಳೆ ಗಿಡದಿಂದ ಉದುರುವಂತಾಗಿದೆ. ಕಾಫಿ ಬೆಳೆಗೆ ಮಂಗಗಳ ಕಾಟವು ಅತಿಯಾಗಿದ್ದು, ಕಾಫಿ ಹಣ್ಣು ತಿಂದು ಹಾಳು ಮಾಡುತ್ತಿವೆ. ಬೆಲೆ ಗಗನಮುಖಿಯಾಗಿದ್ದರು ಕುಯ್ಲು ಮಾಡಲಾಗದೆ, ಕುಯ್ದ ಫಸಲು ಗುಣಮಟ್ಟವಿಲ್ಲದೆ ರೈತರು ನಷ್ಟ ಎದುರಿಸುವ ಆತಂಕ ತಲೆದೂರಿದೆ.