ಮಾಜಿ ಸಚಿವ ಕೆ ಹೆಚ್ ಶ್ರೀನಿವಾಸ್ ಇನ್ನಿಲ್ಲ!
– ಶಿಕಾರಿಪುರ: ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಹೊಸನಗರ: ಬೈಕ್, ಕಾರು ನಡುವೆ ಮುಖಾಮುಖಿ ಡಿಕ್ಕಿ
– ತೀರ್ಥಹಳ್ಳಿ: ಮಾಕೋಡು ಬಳಿ ಹಿಟ್ ಅಂಡ್ ರನ್!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಚ್ ಶ್ರೀನಿವಾಸ್ ನಿಧನರಾಗಿದ್ದಾರೆ. ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ಜನತಾಪರಿವಾರದಲ್ಲಿ ಗುರುತಿಸಿಕೊಂಡಿದ್ದರು.
ಆನಂತರ ಕಾಂಗ್ರೆಸ್ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಶ್ರೀನಿವಾಸ್ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ. ಕೃಷಿಕರೂ ಆಗಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನೆಮಾದಲ್ಲೂ ಅಭಿನಯಿಸಿದ್ದರು.ಶ್ರೀನಿವಾಸ್ ಅವರಿಗೆ 86 ವರ್ಷ ವಯಸ್ಸಾಗಿತ್ತು.ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ಕೆ ಎಚ್. ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ರಾಜಕೀಯ ವಲಯ ಸೇರಿ ಎಲ್ಲಾ ವಲಯದಿಂದಲೂ ಕಂಬನಿ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರ: ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ
ಶಿಕಾರಿಪುರ: ಮನೆಯಲ್ಲಿ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಶಿಕಾರಿಪುರದಲ್ಲಿ ನಡೆದಿದೆ.
ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದ ಗಿರೀಶ್ (30)ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ಕೂಡ ದೊರೆತಿದ್ದು, ಆದರೆ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಯಾರೂ ಕಾರಣವಲ್ಲವೆಂದು ಬರೆದಿರುವುದು ಪತ್ತೆಯಾಗಿದೆ.
ತಂದೆ ಪಿಡಬ್ಲೂಡಿ ಕಚೇರಿಯಲ್ಲಿ ಡಿ.ದರ್ಜೆ ನೌಕರರಾಗಿದ್ದು, ತಂದೆ ಮತ್ತು ತಾಯಿ ಇಬ್ಬರೂ ಕೂಡ ಮಗಳ ಮನೆಗೆ ಎಂದು ಮೈಸೂರಿಗೆ ತೆರಳಿದ್ದರು.
ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್, ಕಾರು ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ
ಹೊಸನಗರ: ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ತೀರ್ಥಹಳ್ಳಿ ರಸ್ತೆಯ ಮಳವಳ್ಳಿ ಕ್ರಾಸ್ ಬಳಿಯಲ್ಲಿ ನಡೆದಿದೆ.
ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗ್ಗಲಿಜೆಡ್ಡು ಗ್ರಾಮದ ಆದಿತ್ಯ (19) ಮತ್ತು ಯಶವಂತ್ (20) ಗಂಭೀರ ಗಾಯಗೊಂಡಿದ್ದಾರೆ.
ತೀರ್ಥಹಳ್ಳಿ ರಸ್ತೆಯ ಮಳವಳ್ಳಿ ಕ್ರಾಸ್ ನಲ್ಲಿ ಬೈಕ್ ಹಾಗೂ ಮಾರುತಿ ಓಮಿನಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಬೈಕ್ ನಲ್ಲಿದ್ದ ಆದಿತ್ಯ ಎಂಬಾತನಿಗೆ ತಲೆಗೆ ತೀವ್ರವಾದ ಪೆಟ್ಟಾಗಿದೆ ಮತ್ತು ಯಶವಂತ್ ಎಂಬಾತನ ಕೈ ಮುರಿತವಾಗಿದೆ. ಕಾರಿನಲ್ಲಿದ್ದ ಕಲ್ಲೂರು ಗ್ರಾಮದ ಅಭಿಷೇಕ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ತೀರ್ಥಹಳ್ಳಿ: ಮಾಕೋಡು ಬಳಿ ಹಿಟ್ ಅಂಡ್ ರನ್!
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೊಪ್ಪ ಗಡಿ ಭಾಗದ ಕಮ್ಮರಡಿ ಬಳಿ ಕಾರೊಂದು ಹಾಲು ಕೊಡಲು ಹೋಗಿದ್ದ ಕೇಳೂರು ಪ್ರಮೋದ್ ಎಂಬುವರ ಬೈಕಿಗೆ ಡಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ. ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.