ಮಲ್ನಾಡ್ ಟಾಪ್ 4 ನ್ಯೂಸ್..!
– ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಕೊಂದ ಯುವಕ!
– ಸಾಗರ: ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ
– ಹೊಸನಗರ: ಕಿಡಿಗೇಡಿಗಳಿಂದ ತೆಂಗಿನ ಗಿಡ ನಾಶ
– ಸಾಲ ವಸೂಲಾತಿ ವಿಳಂಬ: ಖಾಸಗಿ ಬ್ಯಾಂಕ್ ನಿಂದ ದಾಳಿ ರೋಗಪೀಡಿತರನ್ನ ಹೊರಹಾಕಿ ಮನೆ ಸೀಜ್!
NAMMUR EXPRESS NEWS
ಶಿವಮೊಗ್ಗ: ಇದೇ ಜೂ. 3ರ ಬೆಳ್ಳಂ ಬೆಳಗ್ಗೆ ಭದ್ರಾವತಿಯ ಅರಳ್ಳಿಹಳ್ಳಿ ಗ್ರಾಮದಲ್ಲಿ ವೃದ್ದೆಯೊಬ್ಬರ ಬರ್ಬರ ಹತ್ಯೆ ನಡೆದಿತ್ತು. ಆ ದಿನ ಬೆಳಗ್ಗೆ ಗ್ರಾಮದ ವೃದ್ದೆ ಫಜಲುನ್ನಿಸಾ(74), ಮನೆ ಬಳಿ ಇರುವ ಕೊಟ್ಟಿಗೆಗೆ ಹೋಗಿ ಹಸುವಿಗೆ ಆಹಾರ ನೀಡಲು ತೆರೆಳಿದ್ದಳು. ಹಸುವಿಗೆ ಆಹಾರ ಕೊಟ್ಟು ವಾಪಸ್ ಬರುವಾಗ ಅದೇ ಬೀದಿಯ ಮಂಜುನಾಥ್ (45) ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗುತ್ತಿದ್ದನು. ಇದನ್ನು ನೋಡಿದ ಅಜ್ಜಿಯು ಯಾಕೇ ಕೈಯಲ್ಲಿ ಮಚ್ಚು ಎಂದು ಪ್ರಶ್ನೆ ಮಾಡುತ್ತಾಳೆ. ಇದರಿಂದ ವಿಚಲಿತನಾದ ಮಂಜುನಾಥ್ ಅಜ್ಜಿಯ ಮೇಲೆ ಕೋಪಗೊಂಡು, ಕೈಯಲ್ಲಿರುವ ಮಚ್ಚು ಹಿಡಿದುಕೊಂಡು ಅಜ್ಜಿಯ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಾನೆ. ಇತನ ದಾಳಿಯಿಂದ ತನ್ನ ಜೀವ ಉಳಿಸಿಕೊಳ್ಳಲು ಅಜ್ಜಿಯು ಹಸುವಿನ ಕೊಟ್ಟಿಗೆಯಿಂದ ಸುಮಾರು ಎರಡ್ಮೂರು ಮನೆ ದೂರ ಗೀತಮ್ಮ ಎನ್ನುವವರ ಮನೆಯ ಒಳಗೆ ಹೋಗುತ್ತಾರೆ. ಈ ನಡುವೆ ಗೀತಮ್ಮಳ ಮೇಲೆ ಹಲ್ಲೆಗೆ ಮಂಜುನಾಥ್ ಮಂದಾಗುತ್ತಾನೆ. ಆದರೆ, ಗೀತಮ್ಮ ಆತನಿಗಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗುತ್ತಾಳೆ. ಸಿಕ್ಕ ವೃದ್ಧೆಯನ್ನು ಗೀತಮ್ಮಳ ಮನೆಯ ಒಳಗೆ ನುಗ್ಗಿ ಮಂಜುನಾಥ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತಾನೆ. ಬಳಿಕ ಅಲ್ಲಿಂದ ಮಚ್ಚು ಸಮೇತ ಎಸ್ಕೇಪ್ ಆಗುತ್ತಾನೆ. ಇನ್ನು ಆರೋಪಿ ಪರಾರಿಯಾಗುತ್ತ ಕೊಲೆ ಮಾಡಿದ ಮಚ್ಚನ್ನು ಪಕ್ಕದ ಬೀದಿಯಲ್ಲಿ ಬಚ್ಚಿಡುತ್ತಾನೆ. ಇದನ್ನು ನೋಡಿದ ಗ್ರಾಮಸ್ಥರು ಮಂಜುನಾಥ್ಗೆ ಧರ್ಮೇದೇಟು ಕೊಟ್ಟು ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಮಂಜುನಾಥ್ ಏಕಾಏಕಿ ವೃದ್ಧೆಯನ್ನು ಮರ್ಡರ್ ಮಾಡಿದ್ದು ಯಾಕೆ? ಎನ್ನುವುದು ಆರಂಭದಲ್ಲಿ ಯಾರಿಗೂ ಗೊತ್ತಾಗಿಲ್ಲ.
ಈ ಕುರಿತು ಪೊಲೀಸರು ತನಿಖೆ ಶುರು ಮಾಡಿದಾಗ, ‘ಮಂಜುನಾಥ್ ಕಳೆದ ಎರಡು ಮೂರು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತನಿಗೆ ಮದುವೆ ಆಗಿಲ್ಲ. ತಂದೆ ತೀರಿ ಹೋಗಿದರೆ, ತಾಯಿ ಒಬ್ಬಳೇ ಇದ್ದಾಳೆ. ಈ ನಡುವೆ ಗ್ರಾಮದಲ್ಲಿ ಮಂಜುನಾಥ್ ಹುಚ್ಚಾಟ ದಿನೇ ದಿನೇ ಜಾಸ್ತಿ ಆಗಿತ್ತು. ಯುವತಿಯರಿಗೆ ಮತ್ತು ಮಹಿಳೆಯರ ಜೊತೆ ಈತ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ಅರೆ ನಗ್ನನಾಗಿ ಓಡಾಡಿಕೊಂಡು ಯುವತಿಯರಿಗೆ ಮತ್ತು ಮಹಿಳೆಯರಿಗೆ ತೊಂದರೆ ನೀಡುತ್ತಿದ್ದನು. ಇನ್ನು ಗ್ರಾಮದ ಓರ್ವ ಕಾಲೇಜ್ ಯುವತಿಯ ಜೊತೆ ಕೆಲ ದಿನಗಳ ಹಿಂದೆ ಅಸಭ್ಯವಾಗಿ ವರ್ತನೆ ಮಾಡಿದ್ದನು. ಗ್ರಾಮಸ್ಥರು ಮಾನಸಿಕ ಅಸ್ವಸ್ಥನ ತಾಯಿಗೆ ಕರೆದು ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದರು.
ಬಳಿಕ ಮಂಜುನಾಥ್ ನಿರಂತರವಾಗಿ ಮದ್ಯ ಸೇವಿಸಿ ತನ್ನ ಮಾನಸಿಕ ಸಿಮೀತ ಕಳೆದುಕೊಂಡಿದ್ದ. ಕುಡಿದ ಅಮಲಿನಲ್ಲಿ ಆತ ಆಡಿದ್ದೇ ಆಟ ಎನ್ನುವಂತೆ ಗ್ರಾಮದಲ್ಲಿ ಹುಚ್ಚಾಟ ಮಾಡುತ್ತಿದ್ದನು. ಜೂ. 3 ರಂದು ಮಂಜುನಾಥ್ ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗಿದ್ದನ್ನು ವೃದ್ದೆಯು ಪ್ರಶ್ನೆ ಮಾಡಿದ್ದೇ ತಪ್ಪಾಗಿತ್ತು. ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಂಜುನಾಥ್ ಹತ್ಯೆ ಮಾಡಿದ್ದನು. ಸದ್ಯ ಈತನ ಮಾನಸಿಕ ಅಸ್ವಸ್ಥನೋ ಅಥವಾ ನಾಟಕ ಮಾಡುತ್ತಾನೆಯೋ ಎನ್ನುವ ಸಂದೇಹವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ವೃದ್ದೆಯ ಕೊಲೆ ಮಾಡಿರುವ ಮಂಜುನಾಥ್ಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಹಾಗೂ ಮೃತಳ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ. ವಿನಾಕಾರಣ ವೃದ್ದೆಯನ್ನು ಅಟ್ಟಾಡಿಸಿಕೊಂಡು ವ್ಯಕ್ತಿಯು ಹತ್ಯೆ ಮಾಡಿದ್ದಾನೆ. ಈ ಕೊಲೆಯ ಬಳಿಕ ಗ್ರಾಮಸ್ಥರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಹಂತಕನ ಬಂಧನವಾಗಿದೆ. ಆದ್ರೆ ,ಆತ ಮಾನಸಿಕ ಅಸ್ವಸ್ಥನೆಂದು ಮತ್ತೆ ವಾಪಸ್ ಬಂದರೆ ಎನ್ನುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ವೃದ್ದೆ ಕೊಲೆ ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆಯಾಗುವ ಮೂಲಕ ಮೃತರ ಕುಟುಂಬಕ್ಕೆ ನ್ಯಾಯಸಿಗಬೇಕಿದೆ.
ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ!
ಸಾಗರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಹೋಗಿದ್ದ ಮತದಾರರೊಬ್ಬರ ಮೊಬೈಲ್ ಕಳ್ಳತನವಾಗಿರುವ ಘಟನೆ ಸೋಮವಾರ ನಡೆದಿದೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಉದ್ಯಮಿ ವಿನಯ್ ಎನ್.ಆರ್.
ಸೋಮವಾರ ಮತದಾನ ಮಾಡಲು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬೆಳಿಗ್ಗೆ 9:30ಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮತದಾನದ ಕೊಠಡಿ ಹೊರಗಿದ್ದ ಆರಕ್ಷಕರು ಮೊಬೈಲ್ ಇರಿಸಿ ಹೋಗುವಂತೆ ತಿಳಿಸಿದ್ದಾರೆ. ವಿನಯ್ ಮೊಬೈಲ್ ತೆಗೆದು ಆರಕ್ಷಕರು ಸೂಚಿಸಿದ ಜಾಗದಲ್ಲಿ ಇರಿಸಿ ಮತದಾನಕ್ಕೆ ಹೋಗಿದ್ದಾರೆ. ಮತದಾನ ಮಾಡಿ ಹೊರಗೆ ಬಂದಾಗ ಬೆಲೆಬಾಳುವ ಮೊಬೈಲ್ ನಾಪತ್ತೆಯಾಗಿತ್ತು. ಇಟ್ಟ ಮೊಬೈಲ್ ನಾಪತ್ತೆಯಾಗಿರುವ ಬಗ್ಗೆ ಆರಕ್ಷಕರಿಗೆ ಕೇಳಿದರೆ ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮತಗಟ್ಟೆ ಹತ್ತಿರ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ವಿನಯ್ ಚುನಾವಣೆ ಅಧಿಕಾರಿಗಳ ಬಳಿ ಸಿಸಿ ಕ್ಯಾಮರಾ ಫುಟೇಜ್ ಕೇಳಿದರೆ ಸಿಸಿ ಕ್ಯಾಮರಾ ಹಾಳಾಗಿದ್ದಾಗಿ ತಿಳಿಸಿದ್ದಾರೆ. ಪ್ರಮುಖವಾದ ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡಿ ಅದರ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು. ಮತದಾನ ಕೇಂದ್ರದಲ್ಲಿ ಗಲಾಟೆ ನಡೆದರೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಚುನಾವಣಾಧಿಕಾರಿಗಳ ಬೇಜವಾಬ್ದಾರಿತನ ಇಲ್ಲಿ ಎದ್ದು ಕಾಣುತ್ತಿದೆ ಎಂದು ವಿನಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಕಳವಿಗೆ ಸಂಬಂಧಪಟ್ಟಂತೆ ವಿನಯ್ ನಗರ ಠಾಣೆಗೆ ದೂರು ನೀಡಿದ್ದಾರೆ.
ಹೊಸನಗರ: ಕಿಡಿಗೇಡಿಗಳಿಂದ ತೆಂಗಿನ ಗಿಡ ನಾಶ!
ಹೊಸನಗರ: ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಡಾಹೊಸಹಳ್ಳಿ ಗ್ರಾಮದ ಲಕ್ಷ್ಮಮ್ಮ ಎಂಬುವರ ತೋಟದಲ್ಲಿ 10ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿ ದುಷ್ಖೃತ್ಯ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕರು ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಡಾಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮಮ್ಮ ಕೋಂ ಗೋಪಾಲ ರವರ ತೋಟದ ಮಧ್ಯ ಮತ್ತು ಅಂಚುಗಳಲ್ಲಿ ತೆಂಗಿನ ಮರಗಳನ್ನು ಕಡಿಯಲಾಗಿದೆ. ತೋಟದ ಅಂಚಿನಲ್ಲಿ ಮನೆ ಇದ್ದು ಬುಧವಾರ ತಡರಾತ್ರಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ವಡಾಹೊಸಳ್ಳಿ ಗ್ರಾಮದ ಸ.ನಂ.28ರಲ್ಲಿ 1-20 ಎಕರೆ ಜಮೀನನ್ನು ಸುಮಾರು ವರ್ಷಗಳಿಂದ ಬಗಹುಕುಂ ಸಾಗುವಳಿ ಮಾಡುತ್ತಿರುವ ಲಕ್ಷ್ಮಮ್ಮ ಸದರಿ ಜಮೀನಿಗೆ ಸುತ್ತಲು ಕಲ್ಲು ಕಂಬದ ಬೇಲಿ ನಿರ್ಮಿಸಿದ್ದಾರೆ. ಸದರಿ ಜಮೀನಿನ ಮಂಜೂರಾತಿಗಾಗಿ ಈ ಹಿಂದೆಯೇ ಫಾರಂ 53ಯಡಿ ಅರ್ಜಿ ಸಲ್ಲಿಸಿದ್ದಾರೆ. ಕಿಡಿಗೇಡಿಗಳು ಮಾಲೀಕರು ಮಲಗಿರುವ ವೇಳೆಯಲ್ಲಿ ಹತ್ತು ತೆಂಗಿನ ಗಿಡಗಳನ್ನು ಕಿತ್ತು ಕಡಿದು ಹಾಕಿದ್ದಾರೆ.
ಸಾಲ ವಸೂಲಾತಿ ವಿಳಂಬ: ಖಾಸಗಿ ಬ್ಯಾಂಕ್ ನಿಂದ ಮನೆಗೆ ದಾಳಿ. ರೋಗಪೀಡಿತರನ್ನ ಹೊರಹಾಕಿ ಮನೆ ಸೀಜ್:
ಶಿಕಾರಿಪುರ: ಪಟ್ಟಣದ ಖಾಸಗಿ ಬ್ಯಾಂಕ್ವೊಂದರಲ್ಲಿ ಕಳೆದ ಆರು ವರ್ಷಗಳ ಹಿಂದೆ ಚನ್ನಹಳ್ಳಿ ಗ್ರಾಮದ ಲತಾ ನಾಗರಾಜಪ್ಪ 3.60 ಲಕ್ಷ ರೂ. ಸಾಲ ಸಾಲ ಪಡೆದಿದ್ದರು. ಅದರಲ್ಲಿ ಈಗಾಗಲೆ 3.10ಲಕ್ಷ ರೂ. ಮರುಪಾವತಿಸಿದ್ದಾರೆ. ಇನ್ನೂ 3.65ಲಕ್ಷ ರೂ. ಬಾಕಿ ಇದ್ದು ಅದನ್ನು ಕಟ್ಟುವುದಕ್ಕೆ ಸಮಯ ಕೇಳಿದರೂ ಪ್ರಯೋಜವಾಗಿಲ್ಲ. ಮನೆಯಲ್ಲಿ ಹೆಂಡತಿ, ಮಗ, ಇಲ್ಲದ ಸಂದರ್ಭದಲ್ಲಿ ಪ್ಯಾರಲಿಸಿಸ್ ಪೀಡಿತ ನಾಗರಾಜಪ್ಪ ಅವರಿಗೆ ಮನೆಯಿಂದ ಹೊರಗೆ ಕಳುಹಿಸಿ ಮನೆಯ ಹಿಂಬಾಗಿಲು, ಮುಂಬಾಗಿಲು ಸೀಜ್ ಮಾಡಲಾಗಿದ್ದು ಕುಟುಂಬ ಕಂಗಾಲಾಗಿದೆ. ಇಡೀ ಕುಟುಂಬ ಅವರಿವರ ಮನೆಯಲ್ಲಿ ಊಟ ಮಾಡುತ್ತಿದ್ದು ಮಗ ದೇವಸ್ಥಾನ ಕಟ್ಟೆಮೇಲೆ ಮಲಗಿದರೆ, ಗಂಡ ಹೆಂಡತಿ ಮತ್ತೊಬ್ಬರ ಮನೆಯಲ್ಲಿ ರಾತ್ರಿ ಆಶ್ರಯ ಪಡೆದಿದ್ದಾರೆ. ಬೆಳಗ್ಗೆ ಆಗುತ್ತಿದ್ದಂತೆ ಹೆಂಡತಿ, ಮಗ ಕೂಲಿ ಕೆಲಸಕ್ಕೆ ಹೋದರೆ ನಾಗರಾಜಪ್ಪ ಅವರಿವರ ಮನೆ ಕಟ್ಟೆ ಮೇಲೆ ಕಾಲಕಳೆಯುತ್ತಿದ್ದಾರೆ.
ಕುಟುಂಬದ ಯಜಮಾನ ನಾಗರಾಜಪ್ಪ ಅವರಿಗೆ 2 ವರ್ಷದ ಹಿಂದೆ ಪ್ಯಾರಲಿಸಿಸ್ ಆಗಿದ್ದು ಅಂದಿನಿಂದ ಸಾಲದ ಕಂತು ಕಟ್ಟುವುದು ವಿಳಂಬವಾಗಿದೆ. ಕುಟುಂಬಕ್ಕೆ ಇದ್ದ 10 ಗುಂಟೆ ಜಮೀನು ಮಾರಾಟ ಮಾಡಿದ್ದು ಹಣ ಬಾರದೆ ಸಮಸ್ಯೆ ಇನ್ನಷ್ಟು ಬಿಗುಡಾಯಿಸಿದೆ. ನಿತ್ಯ ನುಂಗುವ ಗುಳಿಗೆಯೂ ಮನೆಯೊಳಗೆ ಇದ್ದು ಅದನ್ನಾದರೂ ತೆಗೆದುಕೊಡಿ ಎನ್ನುವ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಮನೆಯಿದ್ದರೂ ಬೇರೊಬ್ಬರ ಮನೆ ಆಶ್ರಯದಲ್ಲಿ ಇರಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿರುವ ಕುಟುಂಬಕ್ಕೆ ತಾಲೂಕು ಆಡಳಿತ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ