ರಸ್ತೆಯ ಹೊಂಡ- ಗುಂಡಿಗಳಿಗೆ ಬಾಳೆಗಿಡ ನೆಟ್ಟ ಬಿಜೆಪಿ
* ಈಗ ಸಾಂಕೇತಿಕ ಹೋರಾಟ, ಉಗ್ರ ಹೋರಾಟದ ಎಚ್ಚರಿಕೆ
* ರಸ್ತೆಗೆ ಬಂದರೆ ಹೊಂಡ,ತೋಟಕ್ಕೆ ಹೋದರೆ ಆನೆ ಕಾಟ
NAMMMUR EXPRESS NEWS
ಎನ್ ಆರ್ ಪುರ: ರಸ್ತೆಯಲ್ಲಿ ಉಂಟಾಗಿರುವ ಗುಂಡಿ,ಕ್ಷೇತ್ರದಲ್ಲಿರುವ ಆನೆ ಸಮಸ್ಯೆಗಳಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಎನ್ ಆರ್ ಪುರ ತಾಲೂಕು ಬಿಜೆಪಿ ವತಿಯಿಂದ ತಾಲೂಕಿನ ಕೈಮರದಲ್ಲಿ ರಸ್ತೆ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು,ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಾತು.
ಶೃಂಗೇರಿ ಕ್ಷೇತ್ರದಾದ್ಯಂತ ಎಲ್ಲಾ ರಸ್ತೆಗಳಲ್ಲೂ ಹೊಂಡ, ಗುಂಡಿಗಳು ಬಿದ್ದಿದ್ದು ಶಾಸಕರು ಕೂಡಲೇ ಹೊಂಡ ಮುಚ್ಚಿಸಬೇಕು ಇಲ್ಲದಿದ್ದರೆ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಶಾಸಕರು ಗುಣಮಟ್ಟದ ರಸ್ತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಗುಣಮಟ್ಟದ ರಸ್ತೆ ಮಾಡಿದ್ದರೆ ಇಷ್ಟು ಬೇಗ ಹೊಂಡಗಳು ಬೀಳುತ್ತಿರಲಿಲ್ಲ. ಹಣವೆಲ್ಲಾ ಗ್ಯಾರಂಟಿಗೆ ಹೋಗುತ್ತಿದೆ ಎನ್ನುತ್ತಿದ್ದಾರೆ. ಆದರೆ,ಗ್ಯಾರಂಟಿ ಬಂದ ತಕ್ಷಣ ತೆರಿಗೆ ಜಾಸ್ತಿ ಮಾಡಿ ಹಣ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ಅಭಿವೃದ್ಧಿಗೆ ಇಟ್ಟ ಹಣದಿಂದ ಗುಂಡಿಗಳನ್ನು ಮುಚ್ಚಬೇಕಾಗಿತ್ತು. ಈಗ ಸಾಂಕೇತಿಕ ಹೋರಾಟ ಮಾಡಿತ್ತಿದ್ದು,ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ವಿ. ನೀಲೇಶ್ ಮಾತನಾಡಿ,ಇಂದು ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲೂ ರಸ್ತೆ ಹೊಂಡ ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ಜನರಿಗೆ ಗ್ಯಾರಂಟಿ ಭಾಗ್ಯ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ ರಸ್ತೆ ತುಂಬಾ ಹೊಂಡ ಬಿದ್ದಿರುವುದರಿಂದ ಶಿವಮೊಗ್ಗಕ್ಕೆ ರೋಗಿಗಳನ್ನು ಕರೆತಂದು ಆ್ಯಂಬುಲೆನ್ಸ್ ಹೋಗಲು ಸಹ ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಂದಿದೆ. ಬೈಕ್ ಸವಾರರು ಗುಂಡಿಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಶಾಸಕರು ಕ್ಷೇತ್ರದ ಎಲ್ಲಾ ರಸ್ತೆಗಳಲ್ಲಿ ಓಡಾಡಿದರೆ ರಸ್ತೆ ಹೊಂಡಗಳು ಕಣ್ಣಿಗೆ ಬೀಳುತ್ತದೆ. ರಸ್ತೆಗೆ ಬಂದರೆ ಹೊಂಡ, ತೋಟಕ್ಕೆ ಹೋದರೆ ಆನೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ,ಕೂಡಲೇ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ.ಎನ್. ನಾಗೇಶ್, ಪ್ರೀತಮ್ ಬಿಜೆಪಿ ಮುಖಂಡರಾದ ಪಿ.ಜೆ.ಆಂಟನಿ, ಎನ್.ಎಂ.ಕಾಂತ ರಾಜ್, ಎ.ಬಿ. ಮಂಜುನಾಥ್, ಎಚ್.ಡಿ. ಲೋಕೇಶ್, ಅಶ್ವನ್, ಶ್ರೀನಾಥ್, ಸುರಭಿರಾಜೇಂದ್ರ, ಪರ್ವೀಜ್, ಆಶಿಶ್ ಕುಮಾರ್, ರೀನಾ ಬೆನ್ನಿ, ವಿಜಯಕುಮಾರ್, ಪ್ರಸಾದ್, ಪ್ರವೀಣ್, ಪ್ರಸನ್ನ, ಜಗದೀಪ್, ಎಸ್.ಡಿ. ಹಾಗೂ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.








