ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ನ್ಯೂಸ್..!!
– 5 ಕೆಜಿ ಅಕ್ಕಿ ಬದಲಿಗೆ ಇಂದಿರಾ ಆಹಾರ ಕಿಟ್
– ಅಕ್ಕಿಯ ದುರ್ಬಳಕೆ ತಡೆಯುವುದು ರಾಜ್ಯ ಸರ್ಕಾರದ ಉದ್ದೇಶ
NAMMUR EXPRESS NEWS
ಬೆಂಗಳೂರು: ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಆಹಾರ ಕಿಟ್ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಕುಟುಂಬ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಜತೆಗೆ ಕುಟುಂಬಕ್ಕೆ ಒಂದು ಆಹಾರ ಕಿಟ್ ಸಿಗಲಿದೆ. ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ಘೋಷಣೆ ಮಾಡಿತ್ತು. ಆರಂಭದಲ್ಲಿ ಅಕ್ಕಿ ದಾಸ್ತಾನು ಲಭ್ಯವಿಲ್ಲ ಎಂದು 10 ಕೆಜಿ ಪೈಕಿ 5 ಕೆಜಿ ಅಕ್ಕಿ ನೀಡಿ, ಉಳಿದ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿ ಕುಟುಂಬದ ಯಜಮಾನರ ಖಾತೆಗೆ ಜಮೆ ಮಾಡುತ್ತಿತ್ತು. ಆ ಬಳಿಕ ಅಕ್ಕಿ ದಾಸ್ತಾನು ಲಭ್ಯವಾದ ಹಿನ್ನೆಲೆ ತಲಾ 10 ಕೆಜಿ ನೀಡುತ್ತಿತ್ತು. ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದಲ್ಲಿ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ.
ಇಂದಿರಾ ಆಹಾರ ಕಿಟ್ ನೀಡಲು ಸರ್ಕಾರ ನಿರ್ಧಾರ ಈ ಬಗ್ಗೆ ಸಚಿವ ಎಚ್ಕೆ ಪಾಟೀಲ್ ಮಾಹಿತಿ ನೀಡಿದ್ದು, ” ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ಪರ್ಯಾಯವಾಗಿ “ಇಂದಿರಾ ಆಹಾರ ಕಿಟ್” ವಿತರಿಸಲು ಸಂಪುಟ ಅನುಮೋದನೆ ನೀಡಿದೆ. 61.19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಪೌಷ್ಟಿಕ ಆಹಾರ ಕಿಟ್ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಅನ್ನಭಾಗ್ಯ ಆಹಾರ ಕಿಟ್ನಲ್ಲಿ ಏನೆಲ್ಲಾ ಇರಲಿದೆ ?
ತೊಗರಿಬೇಳೆ – 2 ಕೆ.ಜಿ
ಅಡುಗೆ ಎಣ್ಣೆ – 1 ಕೆ.ಜಿ
ಸಕ್ಕರೆ – 1 ಕೆ.ಜಿ
ಉಪ್ಪು – 1 ಕೆ.ಜಿ
– ಅನ್ನಭಾಗ್ಯ ಅಕ್ಕಿ ದುರ್ಬಳಕೆ ತಡೆಯುವುದು ಉದ್ದೇಶ
5 ಕೆ.ಜಿ ಅಕ್ಕಿಯ ಜೊತೆಗೆ ಈ ಕಿಟ್ ಅನ್ನು ನೀಡಲಾಗುವುದು. ಈ ಹಿಂದೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲು ನೀಡಲಾಗುತ್ತಿದ್ದ ಹಣದ ಬದಲಿಗೆ ಈ ಕಿಟ್ ನೀಡಲಾಗುತ್ತದೆ. ಅಕ್ಕಿ ದುರ್ಬಳಕೆ ತಡೆಯುವುದು ಕೂಡ ಇದರ ಒಂದು ಉದ್ದೇಶವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕುಟುಂಬ ಸದ್ಯರಿಗೆ ತಲಾ 10 ಕೆಜಿ ಅಕ್ಕಿ ಸಿಗುತ್ತಿದ್ದ ಕಾರಣ ದುರ್ಬಳಕೆಯಾಗುತ್ತಿತ್ತು. ಕುಟುಂಬಗಳಲ್ಲಿ 5 ಜನ ಇದ್ದರೆ 50 ಕೆಜಿ ಅಕ್ಕಿ ತಿಂಗಳಿಗೆ ಬರುತ್ತಿತ್ತು. ಇದು ಕುಟುಂಬಗಳಿಗೂ ಹೊರೆಯಾಗುತ್ತಿತ್ತು. ಸದ್ಯ ಇತರೆ ದಿನಸಿ ಸಾಮಗ್ರಿ ಒಳಗೊಂಡ ಕಿಟ್ ನೀಡುತ್ತಿರುವುದು ಫಲಾನುಭವಿಗಳಿಗೂ ಅನುಕೂಲವಾಗಲಿದೆ.







