ತೀರ್ಥಹಳ್ಳಿ ಮುಜುರಾಯಿ ದೇವಸ್ಥಾನ ಅರ್ಚಕರ–ಆಗಮಿಕರ ಒಕ್ಕೂಟದ ಸರ್ವ ಸದಸ್ಯರ ಸಭೆ
– 168 ಮುಜರಾಯಿ ದೇವಾಲಯಗಳ ಅರ್ಚಕರ ಸಮಾಗಮ
– ಒಂದು ವರ್ಷದಲ್ಲಿ ಸಂಘಟನೆ ಅಭಿವೃದ್ಧಿ ಕೆಲಸ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮುಜುರಾಯಿ ದೇವಸ್ಥಾನ ಅರ್ಚಕರ–ಆಗಮಿಕರ ಒಕ್ಕೂಟದ ಸರ್ವ ಸದಸ್ಯರ ಸಭೆ ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿಗಳಾದ ದರ್ಶನ್ ಬಾಯರ್ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಲ್ಲಿ ಒಕ್ಕೂಟವು ಕಳೆದ ಒಂದು ವರ್ಷದಲ್ಲಿ ನಡೆದು ಬಂದ ಹಾದಿ ಹಾಗೂ ಕೈಗೊಂಡ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಸಂಘಟನಾ ಕಾರ್ಯದರ್ಶಿಯಾದ ರಾಕೇಶ್ ಭಟ್ ಅವರು ನಿರೂಪಣೆ ಮಾಡುತ್ತಾ, ಪ್ರತಿ ತಿಂಗಳು ಶ್ರೀ ರಾಮಚಂದ್ರಪುರ ಮಠದ ಆವರಣದಲ್ಲಿ ಸಭೆ ಸೇರಿ ಅರ್ಚಕರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ಈ ಹಿಂದೆ ಒಕ್ಕೂಟದ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಕೆ ಎಸ್ ಎನ್ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಸಂಘಟನೆಯು ಹಲವು ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಚಕರಿಗೆ ಐಡಿ ಕಾರ್ಡ್ ವಿತರಣೆ, ತಸ್ತಿಕ್ ಹಣ ವಿತರಣೆ, ತಾತ್ಕಾಲಿಕ ನೇಮಕಾತಿ ಪತ್ರ ನೀಡಿಕೆ, ಡಿಬಿಟಿ ಅರ್ಜಿ ಸಲ್ಲಿಕೆ ಹಾಗೂ ಹೊಸ ನೇಮಕಾತಿ ಪ್ರಕ್ರಿಯೆ ಮುಂತಾದ ಕಾರ್ಯಗಳು ನಡೆದಿರುವುದಾಗಿ ತಿಳಿಸಿದರು. ತಾಲೂಕು ಒಕ್ಕೂಟದ ಅಧ್ಯಕ್ಷರಾದ ರಾಘವೇಂದ್ರ ಭಟ್ ಅವರು ಮಾತನಾಡಿ, ಸಂಘಟನೆಯ ಮುಂದಿನ ಯೋಜನೆಗಳನ್ನು ವಿವರಿಸಿ, ಒಕ್ಕೂಟದ ಬಲವರ್ಧನೆಗಾಗಿ ವಾರ್ಷಿಕ ಸದಸ್ಯತ್ವ ಶುಲ್ಕ ಸಂಗ್ರಹಿಸಲು ಎಲ್ಲರ ಸಹಕಾರ ಕೋರಿದರು.
168 ಮುಜರಾಯಿ ದೇವಾಲಯ: ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 168 ಮುಜರಾಯಿ ದೇವಾಲಯಗಳು ಇರುವುದಾಗಿ ತಿಳಿಸಿ, ಒಕ್ಕೂಟದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸುವುದಾಗಿ ತಿಳಿಸಿದರು. ಅನಾರೋಗ್ಯ ಪೀಡಿತ ಹಾಗೂ ಶುಭ–ಅಶುಭ ಸಂದರ್ಭಗಳಲ್ಲಿ ಅರ್ಚಕರಿಗೆ ನೆರವಾಗಲು ದಾನಿಗಳ ಸಹಕಾರ ಕೋರಿದರು.
ಶೀಘ್ರದಲ್ಲೇ ಜಿಲ್ಲಾ ಒಕ್ಕೂಟದ ಸಮಾವೇಶ ನಡೆಯಲಿದ್ದು, ಅದನ್ನು ಯಶಸ್ವಿಗೊಳಿಸಲು ಎಲ್ಲ ಸದಸ್ಯರ ಸಹಭಾಗಿತ್ವ ಕೋರಿದರು. ಇದೇ ಸಂದರ್ಭದಲ್ಲಿ 2ನೇ ಹಂತದ ಐಡಿ ಕಾರ್ಡ್ಗಳನ್ನು ವಿತರಿಸಲಾಯಿತು. ಕೊನೆಯಲ್ಲಿ ಸರ್ವರಿಗೂ ವಂದನೆ ಸಲ್ಲಿಸಲಾಯಿತು. ಸಭೆಯಲ್ಲಿ ಅರವಿಂದ್ ಅಕ್ಲಾಪುರ, ಹರೀಶ್ ಡಿ.ಬಿ., ನಾಗರಾಜ್ ಹೋರಣೆಬೈಲು ಮುಂತಾದ ಅರ್ಚಕರು ಉಪಸ್ಥಿತರಿದ್ದರು.








