ರಾಜ್ಯ ಸರ್ಕಾರ ದಿವಾಳಿ!: ಪ್ರದೀಪ್ ಗಬಡಿ ಆಕ್ರೋಶ
– ವೃದ್ದಾಪ್ಯ, ವಿಧವಾ, ಅಂಗವಿಕಲ ವೇತನ, ಬಡವರ ಬಿಪಿಎಲ್ ಕಾರ್ಡ್ ರದ್ದು: ಜನರಿಗೆ ಅನ್ಯಾಯ
– ಸಾವಿರಾರು ಫಲಾನುಭವಿಗಳ ಪಟ್ಟಿಗಳನ್ನು ರದ್ದು ಏಕೆ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ವೃದ್ದಾಪ್ಯ, ವಿಧವಾ, ಅಂಗವಿಕಲ ವೇತನ, ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದ್ದು, ದಿವಾಳಿ ಎದ್ದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಬಿಜೆಪಿ ಯುವ ಮುಖಂಡರಾದ ಪ್ರದೀಪ್ ಗಬಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಸರ್ಕಾರ ದಿವಾಳಿ ಎದ್ದಿದ್ದು ಅಭಿವೃದ್ಧಿಗೆ ಹಣ ನೀಡದ ಸ್ಥಿತಿಗೆ ತಲುಪಿದೆ. ಆರ್ಥಿಕ ಮುಗ್ಗಟ್ಟಿನಿಂದ ಸರ್ಕಾರ ನಡೆಸಲು ಆಗದ ಹಿನ್ನಲೆಯಲ್ಲಿ ಈ ಹಿಂದೆ ವಿವಿಧ ಸರ್ಕಾರಗಳು ನೀಡಿದ ಜನಪರ ಯೋಜನೆಗಳನ್ನು ನಿಧಾನವಾಗಿ ನಿಲ್ಲಿಸುವ ಸಂಚು ರೂಪಿಸಿದೆ ಎಂದು ತೀರ್ಥಹಳ್ಳಿ ಯುವ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗಬಡಿ ಆರೋಪಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಆದರ ಭಾಗವಾಗಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನಗಳನ್ನು ಈಗಾಗಲೇ ಮನ ಬಂದಂತೆ ತಾಲ್ಲೂಕಿನಾದ್ಯಂತ ಸಾವಿರಾರು ಫಲಾನುಭವಿಗಳ ಪಟ್ಟಿಗಳನ್ನು ರದ್ದು ಪಡಿಸಿದೆ. ಜೊತೆಗೆ ಆರೋಗ್ಯ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಸೃಷ್ಟಿಸಿಕೊಳ್ಳಲು ಬಡವರು ಮಾಡಿರುವ ಬ್ಯಾಂಕ್ ಸಾಲ ವರದಿಗಳನ್ನು ಪಡೆದು ಅವರ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಿದ್ದಾರೆ. ಬಡವರ ಸೌಲತ್ತುಗಳನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಮತ್ತಷ್ಟು ಬಡತಕ್ಕೆ ತಳ್ಳುವ ಕೆಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಕೆಟ್ಟ ಚಾಳಿಯಿಂದಾಗಿ ತಾಲ್ಲೂಕಿನಾದ್ಯಂತ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಬಿಪಿಎಲ್ ಕಾರ್ಡು ಇಲ್ಲದೆ ಬಡ ಕುಟುಂಬಗಳು ಲಕ್ಷಾಂತರ ವೆಚ್ಚದ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ನಿತ್ಯ ಸಾವಿರಾರು ಕುಟುಂಬಗಳು ತಾಲ್ಲೂಕು ಕಚೇರಿ ಅಲೆದು ಕಾರ್ಡಿಗಾಗಿ ದುಂಬಾಲು ಬೀಳುತ್ತಿದ್ದರು ಆಡಳಿತರೂಡ ರಾಜ್ಯ ಸರ್ಕಾರ ಅವರ ಅಹವಾಲು ಸ್ವೀಕರಿಸದಷ್ಟು ಕುರುಡಾಗಿದೆ.
ವಿಧವಾ ವೇತನ, ಅಂಗವಿಕಲ ವೇತನದಂತಹ ಅವಶ್ಯಕ ಸೇವೆ ಸಿಗದಿದ್ದರೆ ಈಗಾಗಲೇ ನೊಂದಿರುವ ಕುಟುಂಬಗಳು ಮತ್ತಷ್ಟು ತೊಳಲಾಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಬಡವರ ಭಾಗ್ಯಗಳನ್ನು ಕಿತ್ತುಕೊಳ್ಳುವ ದುಷ್ಟ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಪ್ರದೀಪ್ ಗಬಡಿ ಆಗ್ರಹಿಸಿದ್ದಾರೆ.








