ಶುರುವಾಗಲಿದೆ ಗುಡುಗು ಸಹಿತ ಮಳೆ!
– ಒಂದು ವಾರ ಕಾಲ ಪೂರ್ವ ಮುಂಗಾರು ಚುರುಕು
– ಬೆಂಗಳೂರು ಸೇರಿ ಎಲ್ಲೆಡೆ ಮಳೆ: ಜನರಿಗೆ ಇಲಾಖೆ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕಾಗಿದ್ದು 22 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಬೆಂಗಳೂರು ಸೇರಿ ಹಲವೆಡೆ ಮಳೆ ಆಗುತ್ತಿದೆ. ಕರ್ನಾಟಕ ಸಹಿತ ದಕ್ಷಿಣ ಭಾರತದ ಮೇಲೆ ಮುಂದಿನ ಕೆಲವು ದಿನ ಹವಾಮಾನ ಬದಲಾವಣೆಯ ಅಲೆ ಅಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಸಿದೆ. ಎರಡು ದಿನಗಳ ಕಾಲ ಗರಿಷ್ಠ ಉಷ್ಣಾಂಶ ದಾಖಲಾದರೂ ಸಾಧಾರಣ ಮಳೆ ಮುಂದುವರಿಯಲಿದೆ. ಮೇ 8ರ ನಂತರ ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಮೇ 6 ಮತ್ತು 7 ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಎರಡರಲ್ಲೂ 30 ರಿಂದ 40 ಕಿ.ಮೀ ವೇಗದ ಗಾಳಿ ಸಹಿತ ಹಗುರದಿಂದ ಮಳೆಯಾಗಲಿದೆ.
ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೋಡ-ಬಿಸಿಲಿನ ವಾತಾವರಣ ಇರಲಿದ್ದು ಬಹುತೇಕ ಒಣ ಹವೆ ಮುಂದುವರಿಯಲಿದೆ. ಘಟ್ಟ ಪ್ರದೇಶದ ಒಂದೆರಡು ಕಡೆ ಸಣ್ಣ ಮಳೆ ಸಾಧ್ಯ. ಮುಂದಿನ 2-3 ದಿನ ಇದೇ ವಾತಾವರಣ ಮುಂದುವರಿದು ಮೇ ಎರಡನೇ ವಾರದಲ್ಲಿ ಕರಾವಳಿಯಲ್ಲಿ ಉತ್ತಮ ಮಳೆ ಆಗುವ ಮುನ್ಸೂಚನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಕರಾವಳಿಗೆ ಹೊಂದಿಕೊಂಡ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ. ವಿಶೇಷವಾಗಿ ವಾರ ಕಾಲ ಕೊಡಗು ಜಿಲ್ಲೆಯಲ್ಲಿ ಮಳೆ ಆಗುವ ಮುನ್ಸೂಚನೆ ಇದ್ದು, ಕಾಫಿ ತೋಟ ಮತ್ತು ಕೃಷಿ ಚಟುವಟಿಕೆ ನಡೆಸುವವರು ಹವಾಮಾನ ಬದಲಾವಣೆಗೆ ತಕ್ಕಂತೆ ತಮ್ಮ ಯೋಜನೆ ಹಾಕಿಕೊಳ್ಳಬೇಕಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ದಾವಣಗೆರೆ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಕೆಲವೆಡೆ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಮೇ 5 ಮತ್ತು ಮೇ 6 ರಿಂದ 9ರ ನಡುವೆ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆ 64.5 ಮಿ.ಮೀ ಮೀರುವ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಗುಡುಗು-ಮಿಂಚು ಮತ್ತು 30-40 ಕಿ.ಮೀ ವೇಗದ ಚಂಡಮಾರುತ ಸಹ ಇರಲಿದ್ದು, ದಕ್ಷಿಣ ಒಳನಾಡಿನ ಒಂದೆರಡು ಕಡೆ ಗುಡುಗು ಸಹಿತ ಮಳೆ ಆಗಲಿದೆ ಎಂದು ರಾಜ್ಯ ಮುನ್ಸೂಚನೆ ವರದಿ ಹೇಳಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬಿದರ, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಬಹಳಷ್ಟು ಜಿಲ್ಲೆಗಳಲ್ಲಿ ಈ ವಾರ ಅಧಿಕ ಬಿಸಿಲಿನ ಒಣ ಹವೆ ಮುಂದುವರಿಯಲಿದೆ. ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳ ಕೆಲವೆಡೆ ತುಂತುರು ಮಳೆ ಆಗಬಹುದು. ಉತ್ತರ ಒಳನಾಡಿನಲ್ಲಿ ಮುಂದಿನ 5 ದಿನ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದಿದೆ.








