
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳಿಗೆ ರಾಷ್ಟ್ರೀಯ ಪ್ರಶಸ್ತಿ
– ವಚನ ಪಿತಾಮಹ ಫ ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ
– ಶ್ರೀಗಳ ವಚನ ಸಾಹಿತ್ಯದ ಅನನ್ಯ ಸೇವೆಗೆ ಸಂದ ಗೌರವ
– ಜುಲೈ 2ರಂದು ಪ್ರಶಸ್ತಿ ವಿತರಣೆ: ಭಕ್ತರ ಸಂತಸ
NAMMUR EXPRESS NEWS
ಹೊಸದುರ್ಗ: ಬೆಂಗಳೂರಿನ ಫ ಗು ಹಳಕಟ್ಟಿ ಫೌಂಡೇಷನ್ ಪ್ರತಿವರ್ಷ ವಚನ ಸಾಹಿತ್ಯ ಸಾಧಕರಿಗೆ ಪ್ರಶಸ್ತಿಯನ್ನು ಕೊಡುತ್ತ ಬಂದಿರುವ ಫ ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿಗೆ ಸಾಣೆಹಳ್ಳಿ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು ಭಾಜನರಾಗಿದ್ದಾರೆ.
ವಚನ ಸಾಹಿತ್ಯವನ್ನೇ ತಮ್ಮ ಉಸಿರಾಗಿಸಿಕೊಂಡಿರುವವರು ಶ್ರೀಗಳವರು. ಅವರ ಲೇಖನಿಯಿಂದ ಶರಣರ ಬದುಕನ್ನು ಕುರಿತಂತೆ ಜಂಗಮದೆಡೆಗೆ, ಮೋಳಿಗೆ ಮಾರಯ್ಯ, ಗುರುಮಾತೆ ಅಕ್ಕನಾಗಲಾಂಬಿಕೆ, ಅಂತರಂಗ ಬಹಿರಂಗ ನಾಟಕ ಕೃತಿಗಳು ಹೊರಬಂದಿವೆ.
ಶರಣರ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಧರ್ಮಗುರು, ಶಿವಬೆಳಗು, ಕಾಯಕ ದಾಸೋಹ, ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ವಚನ ವೈಭವ, ಬಸವಧರ್ಮ, ಶರಣ ಸಂಕುಲ, ಲಿಂಗಾಯತ ಧರ್ಮ, ವಚನಕಾರರ ಬದ್ಧತೆ, ಕಲ್ಯಾಣದೆಡೆಗೆ, ಶರಣ ಸಂದೇಶ, ವಚನ ಸಂದೇಶ, ಕಲ್ಯಾಣದ ಬೆಳಕು, ಬಸವಪ್ರಜ್ಞೆ, ಲಿಂಗಾಯತರು ಮತ್ತು ಬಸವ ತತ್ವ, ವಚನ ಸಂವಿಧಾನ ಹೀಗೆ ನೂರಾರು ಕೃತಿಗಳು ಹೊರಬಂದಿವೆ. ಅದರಲ್ಲೂ “ಮತ್ತೆ ಕಲ್ಯಾಣ” ಕೃತಿ ಸಂಪುಟ ಸಂಶೋಧಕರಿಗೆ ಒಂದು ಆಕರ ಗ್ರಂಥದಂತಿದೆ. ಪ್ರತಿವರ್ಷ ನಡೆಯುವ ಶಿವಸಂಚಾರ ರಂಗ ರೆಪರ್ಟರಿಯಲ್ಲಿ ಶರಣರ ತತ್ವಗಳಿಗೆ ಸಂಬಂಧಿಸಿದ ಒಂದು ನಾಟಕ ಇರುತ್ತದೆ. ಪ್ರತಿನಿತ್ಯ ಶರಣರ ವಿಚಾರಗಳ ಪ್ರತಿಪಾದನೆ ಮಾಡುವರು. ಪೂಜ್ಯರ ಈ ಎಲ್ಲ ಸಾಧನೆಯನ್ನು ಗಮನಿಸಿ ಫ ಗು ಹಳಕಟ್ಟಿ ಫೌಂಡೇಶನ್ ನವರು ಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳವರಿಗೆ ಪ್ರಶಸ್ತಿ ಕೊಡಮಾಡಿರುವುದು ಭಕ್ತರಿಗೆ ಸಂತೋಷ ತಂದಿದೆ.
ಜುಲೈ 2ರಂದು ಪ್ರಶಸ್ತಿ ವಿತರಣೆ
ಪ್ರಶಸ್ತಿ ಫಲಕದೊಂದಿಗೆ ಒಂದು ಲಕ್ಷ ನಗದು ಹಣವನ್ನು ಕೊಡುವರೆಂದು ತಿಳಿದುಬಂದಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಜುಲೈ ೨ರಂದು ಸಂಜೆ ೫-೩೦ಕ್ಕೆ ಬೆಂಗಳೂರಲ್ಲಿ ಕುಮಾರಕೃಪಾ ರಸ್ತೆಯ ಗಾಂಧಿ ಭವನದಲ್ಲಿ ನಡೆಯಲಿದೆ ಸಾಣೆಹಳ್ಳಿ ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾರಿದು ಫ ಗು ಹಳಕಟ್ಟಿ..?
ಫ ಗು ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ತನು, ಮನ, ಧನವನ್ನು ಸಮರ್ಪಿಸಿಕೊಂಡವರು. ಅವರ ಪ್ರಯತ್ನ ಪರಿಶ್ರಮ ಇಲ್ಲದಿದ್ದರೆ ಅಮೂಲ್ಯ ವಚನ ಸಾಹಿತ್ಯ ಬೆಳಕು ಕಾಣುವುದು ಕಷ್ಟಸಾಧ್ಯವಾಗಿತ್ತು. ವಚನ ಸಾಹಿತ್ಯ ಸಂಶೋಧನೆ, ಸಂರಕ್ಷಣೆ, ಪ್ರಕಟಣೆಗಾಗಿ ತಮ್ಮ ಮನೆಯನ್ನೇ ಮಾರಿದರು. ಅವರ ಕನಸು ಮನಸಿನಲ್ಲಿ ವಚನ ಸಾಹಿತ್ಯ ಬಿಟ್ಟರೆ ಬೇರೊಂದು ಚಿಂತೆ, ಚಿಂತನ ಇರಲಿಲ್ಲ. ಅವರ ಹೆಸರಿನಲ್ಲಿ ಈ ವಿಶೇಷ ಪ್ರಶಸ್ತಿ ನೀಡಲಾಗುವುದು.
