ಮೂಡಿಗೆರೆ ಪೆಟ್ರೋಲ್ ಕಳ್ಳತನ ಪ್ರಕರಣದ ಹಿಂದಿದೆ ದೊಡ್ಡ ಗ್ಯಾಂಗ್
* 2011ರಲ್ಲಿ ರಾಜ್ಯದಲ್ಲೇ ಅತಿದೊಡ್ಡ ಪೆಟ್ರೋಲ್ ಕಳ್ಳತನ ಮಾಡಿದ್ದ ಗ್ಯಾಂಗ್
* ಅಧಿಕಾರಿಗಳೇ ಶಾಕ್! ಅಪ್ಪ ಮಗನ ಬಂಧನ
NAMMMUR EXPRESS NEWS
ಮೂಡಿಗೆರೆ: 2011 ರಲ್ಲಿ ಪೆಟ್ರೋನೆಟ್ ಕಂಪನಿಯ ಪೈಪ್ ಕೊರೆದು ರಾಜ್ಯದಲ್ಲೇ ಅತಿದೊಡ್ಡ ಪೆಟ್ರೋಲ್ ಕಳ್ಳತನ ಮಾಡಿದ್ದ ಗ್ಯಾಂಗ್ ಮತ್ತೆ ಪೊಲೀಸರ ಅತಿಥಿಯಾಗಿದೆ. ಹಳೆ ಚಾಳಿ ಬಿಡದ ಗ್ಯಾಂಗ್ ಮತ್ತೆ ಪೈಪ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಶಿಗರ ಗ್ರಾಮದಲ್ಲಿ ಕೋಟ್ಯಂತರ ರೂ ಮೌಲ್ಯದ ಪೆಟ್ರೋಲ್ ಕಳ್ಳತನ ಘಟನೆ ನಡೆದಿದ್ದು, ಇದರಲ್ಲಿ ಪೆಟ್ರೋನೆಟ್ ಸಿಬ್ಬಂದಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
* ಅಧಿಕಾರಿಗಳೇ ಶಾಕ್!, ತಂದೆ-ಮಗನ ಬಂಧನ
ಹಾಸನದ BV3 ವಿಭಾಗದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಶಿಗರು ಗ್ರಾಮದ ಬಳಿ ರಾತ್ರಿ ಪೈಪ್ ಲೈನ್ನಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಹಾಸನದ ಕಚೇರಿಯಲ್ಲಿ ಅಲಾರಾಂ ಸೂಚನೆ ನೀಡಿತ್ತು. ಸ್ಥಳಕ್ಕೆ ಬಂದ ಪೆಟ್ರೋನೆಟ್ ಅಧಿಕಾರಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಹಿರೇಶಿಗರು ಗ್ರಾಮದ ಬಳಿ ಸಿಗ್ನಲ್ ನೀಡಿದ್ದ ಸ್ಥಳದಲ್ಲಿ ಪೆಟ್ರೋಲ್ ವಾಸನೆ ಬಂದಿದ್ದು ಪರಿಶೀಲನೆ ನಡೆಸಿದಾಗ ಟಿಪ್ಪರ್ ಲಾರಿಯೊಳಗೆ 2 ಸಾವಿರ ಲೀಟರ್ ಪೆಟ್ರೋಲ್ ಇರುವುದು ಪತ್ತೆಯಾಗಿತ್ತು. ಟಿಪ್ಪರ್ ಬಳಿ ಪೆಟ್ರೋಲ್ ತೆಗೆಯಲು ಬಳಸುವ ಪೈಪ್, ನಾಲ್ಕು ಕಾರುಗಳು ಪತ್ತೆಯಾಗಿದೆ. ತಕ್ಷಣ ಪೆಟ್ರೋನೆಟ್ ಸಿಬ್ಬಂದಿಗಳು ಗೋಣಿಬೀಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು 2 ಸಾವಿರ ಲೀಟರ್ ಪೆಟ್ರೋಲ್, ಟಿಪ್ಪರ್, ನಾಲ್ಕು ಕಾರುಗಳು ಸೇರಿದಂತೆ ಪೈಪ್ಗಳನ್ನ ವಶಕ್ಕೆ ಪಡೆದಿದ್ದಾರೆ.
ತನಿಖೆ ವೇಳೆ 2011 ರಲ್ಲಿ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅತಿದೊಡ್ಡ ಕೋಟ್ಯಂತರ ರೂ ಮೌಲ್ಯದ ಪೆಟ್ರೋಲ್ ಕಳ್ಳತನ ಮಾಡಿದ್ದ ಗ್ಯಾಂಗ್ ಮತ್ತೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಹಿರೇಶಿಗರು ಗ್ರಾಮದ ವಿಜಯ್ ಕುಮಾರ್ ಗ್ಯಾಂಗ್ ಕಳ್ಳತನ ಮಾಡಿದ್ದು, ವಿಜಯ್ ಕುಮಾರ್ ಸೇರಿ ಆತನ ಪುತ್ರ ಹರ್ಷನನ್ನು ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಪೆಟ್ರೋಲ್ ಕಳ್ಳತನ ಪ್ರಕರಣ ಸಂಬಂಧ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ ಮತ್ತು ಮೂಡಿಗೆರೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಎರಡು ಪೊಲೀಸರ ತಂಡ ರಚನೆ ಮಾಡಲಾಗಿದೆ. ಭೂಮಿಯಿಂದ 5 ಮೀಟರ್ ನಷ್ಟು ಆಳದಲ್ಲಿ ಪೈಪ್ ಲೈನ್ ಇದ್ದು, ಯಾವ ಪ್ರದೇಶದಲ್ಲಿ ರಂಧ್ರ ಮಾಡಿದ್ದಾರೆ ಎಂದು ಪತ್ತೆ ಹಚ್ಚುವುದು ಪೆಟ್ರೋನೆಟ್ ಸಿಬ್ಬಂದಿಗಳಿಗೆ ಸವಾಲಿನ ಕೆಲಸವಾಗಿದೆ.
* ಪೆಟ್ರೋಲ್ ಪೈಪ್ ಲೈನ್ ಏಕೆ,ಹೇಗೆ?
ಅರಬ್ ದೇಶಗಳಿಂದ ಹಡಗಿನಲ್ಲಿ ಬರುವ ಪೆಟ್ರೋಲಿಯಂ ಉತ್ಪನ್ನಗಳನ್ನ ಮಂಗಳೂರಿನ ಬಂದರಿನಿಂದ
ಪೈಪ್ ಲೈನ್ ಮೂಲಕ ಹಾಸನ, ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತೆ. ಮಂಗಳೂರು ಬಂದರಿನಿಂದ ಬೆಂಗಳೂರಿನವರೆಗೂ ಪೈಪ್ ಅಳವಡಿಕೆ ಮಾಡಲಾಗಿದೆ. ಈ ಪೈಪ್ ಲೈನ್ ಕಾಡಿನ ಮಧ್ಯೆ, ಗ್ರಾಮಗಳಲ್ಲಿ ಹಾದುಹೋಗಿದ್ದು,ಇದನ್ನು ಭೂಮಿ ಇಂದ 5 ಮೀಟರ್ ಆಳದಲ್ಲಿ ಅಳವಡಿಕೆ ಮಾಡಲಾಗಿದೆ. ಈ ಪೈಪ್ಗೆ ಚಿಕ್ಕ ರಂಧ್ರ ಮಾಡಿ ಇತರೆ ಪೈಪ್ ಮೂಲಕ ಪೆಟ್ರೋಲ್, ಡಿಸೇಲ್ ಕಳ್ಳತನ ಮಾಡುವುದು ವಿಜಯ್ ಕುಮಾರ್ ಗ್ಯಾಂಗ್ ಕೆಲಸ.2011 ರಲ್ಲಿ ಇದೆ ರೀತಿಯ ಕಳ್ಳತನ ನಡೆಸಲಾಗಿತ್ತು. ಕೋಟ್ಯಂತರ ರೂ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನ ಕದ್ದು ಮಾರಾಟ ಮಾಡಲಾಗಿತ್ತು. ಇದೀಗ ಮತ್ತೆ ಅದೇ ಗ್ಯಾಂಗ್ ಆಕ್ಟಿವ್ ಆಗಿರುವುದು ಬೆಳಕಿಗೆ ಬಂದಿದ್ದು, ವಿಜಯ್ ಕುಮಾರ್ ಗ್ಯಾಂಗ್ನಲ್ಲಿ ಯಾರೆಲ್ಲಾ ಇದ್ದಾರೆ, ಕದ್ದ ಪೆಟ್ರೋಲ್ ಯಾರಿಗೆ ಮಾರಾಟ ಮಾಡುತ್ತಿದ್ದರು ಎಂದೀ ತನಿಖೆ ನಡೆಸಲಾಗುತ್ತಿದೆ.








