
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಆಡಳಿತದಿಂದ ಜನರಿಗೆ ತೊಂದರೆ
– ಬಿಜೆಪಿ ಸದಸ್ಯರಿಂದ ಪಟ್ಟಣ ಪಂಚಾಯತ್ ಮುಂಭಾಗ ಪ್ರತಿಭಟನೆ
– ನೂರೆಂಟು ಹಗರಣ, ಅವ್ಯವಸ್ಥೆ: ಸದಸ್ಯರ ಆರೋಪ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯರು ದುರಾಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಸದಸ್ಯ ಸಂದೇಶ ಜವಳಿ ಮಾತನಾಡಿ, ಸ್ಥಳೀಯ ಸಂಸ್ಥೆಯಾಗಿ ತನ್ನ ಆದಾಯದ ಮೂಲದಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಕಾಂಗ್ರೆಸ್ ಫೇಲ್ ಆಗಿದೆ. ಗೋಪಾಲಗೌಡ ರಂಗಮಂದಿರ ಉಸ್ತುವಾರಿ ಇಲ್ಲದೇ ಹಾಳಾಗುತ್ತಿದೆ. ಪ್ರತಿದಿನ 200 ವ್ಯಾಟ್ ವಿದ್ಯುತ್ ಉತ್ಪತ್ತಿ ಮಾಡಲು ಸೋಲಾರ್ ಅಳವಡಿಸಲಾಗಿತ್ತು. ಅದನ್ನು ಉಸ್ತುವಾರಿ ವಹಿಸದೇ 50-60ಯುನಿಟ್ ವಿದ್ಯುತ್ ಕೂಡಾ ಸಿಗದಂತಾಗಿದೆ. ಬೀದಿ ಬದಿ ವ್ಯಾಪಾರಿಗಳನೇಕರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ ಅವರಿಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡುವ ಅಥವಾ ಅಲ್ಲಿಂದ ತೆಗೆಸುವ ಕೆಲಸ ಆಡಳಿತ ಮಾಡುತ್ತಿಲ್ಲ. ಕಳೆದ ಸಾಲಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದೆವು ಎನ್ನುತ್ತಾರೆ. ಈಗಲೂ ಪಟ್ಟಣದಾದ್ಯಂತ ನಾಯಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಯಾವುದೇ ಜನನ ಮರಣ ಪ್ರಮಾಣ ಪತ್ರಕ್ಕೆ ಬಂದರೂ ತಮ್ಮ ಬಳಿ ತರಬೇಕೆಂಬ ಧೋರಣೆಯನ್ನು ಹೊಂದಿ ಅಧಿಕಾರಿಗಳೊಂದಿಗೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಖಾತೆ ಬದಲಾವಣೆಗೆ ಒಂದು ತಿಂಗಳ ಗಡುವಿದ್ದರೂ ಮೂರು ತಿಂಗಳಾದರೂ ಅರ್ಜಿ ಇಲ್ಲ ಎಂಬ ಉತ್ತರ ಅರ್ಜಿದಾರನಿಗೆ ಸಿಗುತ್ತಿದೆ. ನ್ಯಾಯಾಲಯದಿಂದ ಸೇಲ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಅನುಮತಿ ನೀಡಿ ಎಂಬ ಆದೇಶ ಬಂದರೆ ಬರೀ ಹಕ್ಕುಪತ್ರ ಮಾತ್ರವಿದ್ದು ಬೇರೆ ಯಾವ ದಾಖಲೆ ಇಲ್ಲದ ವ್ಯಕ್ತಿಗೂ ಕಟ್ಟಡ ಕಟ್ಟಲು ಪರವಾನಗಿ ನೀಡುತ್ತಾರೆ. ರಿಯಲ್ ಎಸ್ಟೇಟ್ ದಂಧೆ ಬೆಂಬಲಿಸುತ್ತಿದ್ದಾರಾ? ಅನಧಿಕೃತ ಕಟ್ಟಡಗಳು ಬೇಕಾದಷ್ಟು ತಲೆ ಎತ್ತಿ ನಿಂತಿವೆ. ಪಟ್ಟಣ ಪಂಚಾಯಿತಿಯ ಆಸ್ತಿ ಸಂರಕ್ಷಣೆಗೆ ಕ್ರಮ ವಹಿಸುತ್ತಿಲ್ಲ. ಇರುವ ಆದಾಯ ಮೂಲದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ. ಮಂಗಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೆ ಅವುಗಳನ್ನು ಸ್ಥಳಾಂತರಿಸುವ ಕೆಲಸಕ್ಕೆ ಮುತುವರ್ಜಿ ವಹಿಸುತ್ತಿಲ್ಲ. ಬೀದಿನಾಯಿ, ಜಾನುವಾರು ಮತ್ತು ಮಂಗಗಳ ಕಾಟದಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಅನೇಕ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಮಕೈಗೊಳ್ಳದೇ ಹುಲಿವೇಷ ಸ್ಪರ್ಧೆ ನಡೆಸಿದೆ, ಆಳ್ವಾಸ್ ಕಾರ್ಯಕ್ರಮ ಮಾಡಿಸಿದೆ, ಕ್ರಿಕೆಟ್ ನಡೆಸಿದೆ ಎಂದು ಕಾಲಾಹರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸದಸ್ಯರ ವಾರ್ಡ್ ಗಳಲ್ಲಿ ಕೆಲಸ ಮಾಡಿಸಲು ಎಲ್ಲವೂ ನಿಯಮಬದ್ಧವಾಗಬೇಕೆಂದು ಯಾವುದೇ ಕೆಲಸ ಮಾಡಿಸದೇ ಕಾಲ ಹರಣ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರ ವಾರ್ಡಿನಲ್ಲಿ ಯಾವ ನಿಯಮವೂ ಇಲ್ಲದೇ ಕಾಮಗಾರಿಗಳು ನಡೆಯುತ್ತಿವೆ. ಯಾವಾಗಲೋ ನಡೆದ ಕಾಮಗಾರಿಗಳಿಗೂ ಈಗ ಹಣ ಸಂದಾಯವಾಗುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪುಗುಡ್ಡೆ, ನವೀನ್ ಯತಿರಾಜ್, ರವೀಶ್ ಬಾಬಿ, ಜ್ಯೋತಿ ಮೋಹನ್, ಜ್ಯೋತಿ ಗಣೇಶ, ಮುಖಂಡರಾದ ರಾಜೀವನ್, ಸಂತೋಷ್ ಬಾಳೆಬೈಲು, ನಿಖಿಲ್ ಕಾಮತ್ ಇತರರು ಇದ್ದರು.
